ಶಹಜಹಾನ್ಪುರ: ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವವರೆಗೂ ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ಮುಂದುವರಿಸಲಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ರೈತರು ಕಷ್ಟ ಪಟ್ಟು ಬೆಳೆದ ಉತ್ಪನ್ನಗಳನ್ನು ಕೊಳ್ಳೆ ಹೊಡೆಯಲು ಕೇಂದ್ರ ಸರ್ಕಾರ ಮತ್ತು ಕಾರ್ಪೊರೇಟ್ಗಳ ನಡುವೆ ನಿಕಟ ಒಪ್ಪಂದವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಕಪ್ಪು ಕಾನೂನುಗಳನ್ನು ಹಿಂಪಡೆಯುವವರೆಗೂ, ರೈತರು ದೆಹಲಿಯ ಗಡಿಗಳಲ್ಲೇ ಇರಲಿದ್ದಾರೆ ಎಂದು ಬಿಕೆಯುನ ರಾಷ್ಟ್ರೀಯ ವಕ್ತಾರರಾದ ಟಿಕಾಯತ್ ಹೇಳಿದ್ದಾರೆ. ರೈತರು ಈಗ ತಮ್ಮ ಹಕ್ಕುಗಳ ಬಗ್ಗೆ ತಿಳಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಂತ ಸುಖದೇವ್ ಸಿಂಗ್ ಅವರ 38ನೇ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಟಿಕಾಯತ್ ಮತ್ತು ಇತರ ರೈತ ಮುಖಂಡರು ಉತ್ತರ ಪ್ರದೇಶದ ಬುಂಡಾ ತಹಸಿಲ್ಗೆ ತೆರಳಿ ಗೌರವ ಸಲ್ಲಿಸಿದರು.
ರೈತರ ಚಳವಳಿಯನ್ನು ‘ಧರ್ಮ ಯುದ್ಧ’ಎಂದು ಕರೆದ ಬಿಕೆಯು (ಚಾನುನಿ ಬಣ) ರಾಷ್ಟ್ರೀಯ ಅಧ್ಯಕ್ಷ ಗುರ್ನಾಮ್ ಸಿಂಗ್, ಇದು ರೈತರ ಹಕ್ಕುಗಳನ್ನು ರಕ್ಷಿಸಲು ನಡೆಸುತ್ತಿರುವ ಹೋರಾಟ ಎಂದು ಪ್ರತಿಪಾದಿಸಿದ್ದಾರೆ.
ರೈತರನ್ನು ಗುಲಾಮರನ್ನಾಗಿ ಮಾಡುವುದು ಸರ್ಕಾರದ ಉದ್ದೇಶ, ಇದನ್ನು ಯಾವುದೇ ಸಂದರ್ಭದಲ್ಲೂ ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.