ದ್ವಾರಕಾ (ಗುಜರಾತ್): ಅತ್ಯಾಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಕರಾವಳಿ ಭ್ರದ್ರತಾ ಪಡೆಯನ್ನು ಬಲಿಷ್ಠ ಮತ್ತು ಅಭೇದ್ಯಗೊಳಿಸುವತ್ತ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದರು.
ಗುಜರಾತ್ನ ದ್ವಾರಕಾ ಜಿಲ್ಲೆಯ ದೇವ್ಭೂಮಿಯಲ್ಲಿರುವ ನ್ಯಾಷನಲ್ ಅಕಾಡೆಮಿ ಆಫ್ ಕೋಸ್ಟಲ್ ಪೊಲೀಸಿಂಗ್ಗೆ (ಎನ್ಎಸಿಪಿ) ಭೇಟಿ ನೀಡಿ ಅವರು ಮಾತನಾಡಿದರು.
ಪ್ರತಿಕೂಲ ಹವಾಮಾನ ಮತ್ತು ಭೌಗೋಳಿಕ ಸವಾಲುಗಳ ನಡುವೆಯೂ ಸಂಸ್ಥೆಯನ್ನು ಸ್ಥಾಪಿಸಿದ ಬಿಎಸ್ಎಫ್ ಗುಜರಾತ್ ಕ್ರಮವನ್ನು ಅಮಿತ್ ಶಾ ಶ್ಲಾಘಿಸಿದರು.
‘ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಕರಾವಳಿ ಭದ್ರತಾಪಡೆಯನ್ನು ಅಭೇದ್ಯಗೊಳಿಸಲು ಕೆಲಸ ಮಾಡುತ್ತಿದ್ದೇವೆ. ಕಡಲಿನಲ್ಲಿ ಕರಾವಳಿ ಭದ್ರತಾ ಪಡೆಗಳು ಎದುರಿಸುವ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದು ಹೇಳಿದರು.
ಭವಿಷ್ಯದಲ್ಲಿ ಅಕಾಡೆಮಿಯು ವಿವಿಧ ರಾಜ್ಯಗಳ ಕರಾವಳಿ ಭದ್ರತಾ ಪೊಲೀಸರಿಗೆ ಉನ್ನತ ಮಟ್ಟದ ತರಬೇತಿ ಒದಗಿಸಲಿದೆ ಮತ್ತು ಕಡಲ ಪ್ರದೇಶಗಳ ಭದ್ರತೆಗೆ ಪ್ರಮುಖ ಕೊಡುಗೆ ನೀಡಲಿದೆ ವಿಶ್ವಾಸ ವ್ಯಕ್ತಪಡಿಸಿದರು.
2018ರಲ್ಲಿ ಆರಂಭವಾದ ಅಕಾಡೆಮಿಯು ಓಖಾ ಕರಾವಳಿ ನಗರದ ಸಮೀಪವಿದ್ದು, ಗಡಿ ಭದ್ರತಾ ಪಡೆ ಅದನ್ನು ಮುನ್ನಡೆಸುತ್ತಿದೆ. ಕರಾವಳಿ ಭದ್ರತಾ ಪಡೆಯ ಪೊಲೀಸ್ ಸಿಬ್ಬಂದಿ ಮತ್ತು ಅರೆಸೇನಾಪಡೆಗಳಿಗೆ ತರಬೇತಿ ನೀಡಲು 2018ರಲ್ಲಿ ಆರಂಭವಾದ ದೇಶದ ಮೊದಲ ಶಾಲೆ ಇದಾಗಿದೆ.