ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಿಧ್ಯತೆ ನಿರ್ವಹಣೆಗಾಗಿ ಜಗತ್ತು ಭಾರತದತ್ತ ನೋಡುತ್ತಿದೆ: ಮೋಹನ್ ಭಾಗವತ್

Last Updated 14 ಆಗಸ್ಟ್ 2022, 6:29 IST
ಅಕ್ಷರ ಗಾತ್ರ

ನಾಗಪುರ: ವೈವಿಧ್ಯತೆ ನಿರ್ವಹಣೆಗಾಗಿ ಜಗತ್ತು ಭಾರತದತ್ತ ನೋಡುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.

ಮಹಾರಾಷ್ಟ್ರದ ನಾಗಪುರ ನಗರದಲ್ಲಿ ನಡೆದ ‘2047ರಕ್ಕೆ ಮುನ್ನೋಟ ಮತ್ತು ಯೋಜನೆ’ ಎಂಬ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.

‘ವೈವಿಧ್ಯತೆಯನ್ನು ಸಮರ್ಥವಾಗಿ ನಿರ್ವಹಿಸುವ ವಿಷಯದಲ್ಲಿ ಜಗತ್ತು ಭಾರತದತ್ತ ನೋಡುತ್ತದೆ. ಪ್ರಪಂಚವು ವಿರೋಧಾಭಾಸಗಳಿಂದ ತುಂಬಿದೆ. ಆದರೆ ಭಿನ್ನತೆಯನ್ನು ನಿರ್ವಹಿಸುವುದು ಭಾರತದಿಂದ ಮಾತ್ರ ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು.

‘ನಮಗೆ ಗೊತ್ತಿಲ್ಲದ, ಸರಿಯಾಗಿ ತಿಳಿಸದ ಹಲವು ಐತಿಹಾಸಿಕ ಘಟನೆಗಳು ನಡೆದು ಹೋಗಿವೆ. ಉದಾಹರಣೆಗೆ, ಸಂಸ್ಕೃತ ವ್ಯಾಕರಣ ಭಾರತದಲ್ಲಿ ಹುಟ್ಟಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಏಕೆ ಎಂದು ನಾವು ಎಂದಾದರೂ ಪ್ರಶ್ನೆ ಕೇಳಿದ್ದೇವೆಯೇ? ಯಾಕೆಂದರೆ, ಮುಖ್ಯವಾಗಿ ನಾವು ನಮ್ಮ ಸ್ವಂತಿಕೆ ಮತ್ತು ಜ್ಞಾನವನ್ನು ಮರೆತಿದ್ದೇವೆ. ಇನ್ನೊಂದು, ಕಾರಣವೇನೆಂದರೆ, ಜಗತ್ತಿನ ವಾಯವ್ಯ ಭಾಗದಿಂದ ಬಂದ ಅತಿಕ್ರಮಣಕಾರರು ಭಾರತವನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದರು’ ಎಂದು ತಿಳಿಸಿದರು.

‘ಜಾತಿ ಮತ್ತು ಇತರ ರೀತಿಯ ರಚನೆಗಳಿಗೆ ನಾವು ಅನಗತ್ಯವಾಗಿ ಪ್ರಾಮುಖ್ಯತೆ ನೀಡುತ್ತಿದ್ದೇವೆ. ವೃತ್ತಿಗಾಗಿ ರೂಪುಗೊಂಡ ವ್ಯವಸ್ಥೆಗಳು ಜನರು ಮತ್ತು ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಬಳಕೆಯಾದವು’ ಎಂದು ಅವರು ಅಭಿಪ್ರಾಯಪಟ್ಟರು.

‘ನಾವು ನಮ್ಮ ಭಾಷೆ, ಉಡುಗೆ, ಸಂಸ್ಕೃತಿಗಳಲ್ಲಿ ಸಣ್ಣ ವ್ಯತ್ಯಾಸಗಳನ್ನು ಹೊಂದಿದ್ದೇವೆ. ಆದರೆ ಇದೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳದ, ಎಲ್ಲವನ್ನೂ ಸಮಗ್ರವಾಗಿ ನೋಡುವ ಮನಸ್ಸುಗಳು ನಮಗೆ ಅಗತ್ಯವಿದೆ’ ಎಂದು ಮೋಹನ್‌ ಭಾಗವತ್‌ ಹೇಳಿದರು.

‘ದೇಶದಲ್ಲಿರುವ ಎಲ್ಲಾ ಭಾಷೆಗಳು ರಾಷ್ಟ್ರಭಾಷೆಗಳೇ. ನಾನಾ ಜಾತಿಯ ಜನರೆಲ್ಲರೂ ನಮ್ಮವರು ಎಂಬ ವಾತ್ಸಲ್ಯವನ್ನು ನಾವು ಹೊಂದಬೇಕು’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT