ನವದೆಹಲಿ: ಜಾರಿ ನಿರ್ದೇಶನಾಲಯವು (ಇ.ಡಿ) ಮುಂಬೈ ಮೂಲದ ರಿಯಲ್ ಎಸ್ಟೇಟ್ ಸಮೂಹ ಓಂಕಾರ್ ರಿಯಲ್ಟರ್ಸ್ ಸಂಸ್ಥೆಯ ವಿರುದ್ಧ ಆರೋಪಪಟ್ಟಿ ದಾಖಲಿಸಿದೆ. ಯೆಸ್ ಬ್ಯಾಂಕ್ನಿಂದ ಪಡೆದಿದ್ದ ₹ 400 ಕೋಟಿ ಸಾಲದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿದ್ದ ಆರೋಪದಡಿ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿ ತನಿಖೆ ನಡೆಯುತ್ತಿದೆ.
ಈ ಕುರಿತ ಹೇಳಿಕೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಯು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಆರೋಪಪಟ್ಟಿಯನ್ನು ಮುಂಬೈನ ವಿಶೇಷ ಕೋರ್ಟ್ನಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದೆ.
ಓಂಕಾರ್ ರಿಯಲ್ಟರ್ಸ್ ಅಧ್ಯಕ್ಷ ಕಮಲ್ ಕಿಶೋರ್ ಗುಪ್ತಾ, ವ್ಯವಸ್ಥಾಪಕ ನಿರ್ದೇಶಕ ಬಾಬುಲಾಲ್ ವರ್ಮಾ, ನಟ–ನಿರ್ಮಾಪಕ ಮತ್ತು ವಿಕಿಂಗ್ ಗ್ರೂಪ್ನ ಪ್ರವರ್ತಕ ಸಚಿನ್ ಜೋಷಿ ಮತ್ತು ಅವರ ಕಂಪನಿಗಳನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.
ಈ ಹಿಂದೆ ಪ್ರಕರಣದ ಸಂಬಂಧ ಕಂಪನಿಗಳ ಮೇಲೆ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳು, ಈ ಮೂವರನ್ನು ಬಂಧಿಸಿದ್ದರು. ಯೆಸ್ ಬ್ಯಾಂಕ್ನಿಂದ ಪಡೆದಿದ್ದ ₹ 400 ಕೋಟಿ ಸಾಲವನ್ನು ಅನ್ಯ ಉದ್ದೇಶಕ್ಕೆ ಬಳಸಿದ, ಮರುಪಾವತಿಸದೇ ವಂಚಿಸಿದ ಸಂಬಂಧ ದಾಖಲಾಗಿದ್ದ ಔರಂಗಾಬಾದ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.