ಈ ಜಾಗದ ಆರ್.ಟಿ.ಸಿಯಲ್ಲಿದ್ದ ‘ಪೈಸಾರಿ’ ಎಂಬ ನಿಬಂಧನೆಯನ್ನು ಆದೇಶವಿಲ್ಲದೆ ಕಾನೂನು ಬಾಹಿರವಾಗಿ ‘ಸಾಗುವಳಿ’ ಎಂದು ಬದಲಾಯಿಸಲಾಗಿದೆ ಎಂದು ಸರ್ಕಾರ ಹೇಳಿತ್ತು. 1914ರಲ್ಲಿ ಜಾಗವನ್ನು ಗುತ್ತಿಗೆ ಕೊಡುವಾಗ ಇದ್ದಂತೆಯೇ ಸರಿಪಡಿಸಿ, ಸರ್ಕಾರದ ವಶಕ್ಕೆ ಜಮೀನು ನೀಡುವಂತೆ ಸರ್ಕಾರವು ಹೇಳಿತ್ತು. ಜತೆಗೆ, 99 ವರ್ಷಗಳ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದರಿಂದ ಜಾಗವನ್ನು ಮೀಸಲು ಅರಣ್ಯ ಎಂದು ಪರಿಗಣಿಸಲು ಅರಣ್ಯ ಇಲಾಖೆಯು ಪ್ರಕ್ರಿಯೆ ಆರಂಭಿಸಿತ್ತು. ಟಾಟಾ ಕಂಪನಿಗೆ ನೋಟಿಸ್ ಸಹ ನೀಡಲಾಗಿತ್ತು.
ಆದರೆ, ಟಾಟಾ ಹಾಗೂ ಗ್ಲೆನ್ ಲೋರ್ನಾ ಪ್ಲಾಂಟೇಷನ್ ಸಂಸ್ಥೆಯು ಈ ಪ್ರಕ್ರಿಯೆ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್ ಪ್ರಕರಣವನ್ನು ವಿರಾಜಪೇಟೆಯ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ಜಿ.ಲೋಕೇಶ್ ಅವರು, ಸಂಸ್ಥೆಯ ಅರ್ಜಿ ವಜಾಗೊಳಿಸಿದ್ದಾರೆ. ಸರ್ಕಾರದ ವಶಕ್ಕೆ ಜಮೀನು ಪಡೆಯುವಂತೆ ಆದೇಶಿಸಿದ್ದು, ಪ್ರಕ್ರಿಯೆ ಆರಂಭಿಸಲು ಜಿಲ್ಲಾಧಿಕಾರಿ, ತಹಶೀಲ್ದಾರ್ಗೆ ಸೂಚಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ವಕೀಲೆ ಕಂಜಿತಂಡ ಅನಿತಾ ದೇವಯ್ಯ ವಾದ ಮಂಡಿಸಿದ್ದರು.
‘ನ್ಯಾಯಾಲಯದ ಆದೇಶದ ಪ್ರತಿ ದೊರೆತ ಕೂಡಲೇ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಯೋಗಾನಂದ ಅವರು ಪ್ರತಿಕ್ರಿಯಿಸಿದ್ದಾರೆ.