ಕೋಣಂದೂರು (ತೀರ್ಥಹಳ್ಳಿ ತಾ.): ಸಮೀಪದ ಹೊರಬೈಲ್ ಗ್ರಾಮದ ಸುಧೀರ್ ಭಟ್ ಅವರು ಸಾಕಿಕೊಂಡಿದ್ದ ಹಸುವಿನ ಹೊಟ್ಟೆಯಲ್ಲಿದ್ದ 40 ಕೆ.ಜಿ. ಪ್ಲಾಸ್ಟಿಕ್ ಅನ್ನು ಪಶು ವೈದ್ಯಾಧಿಕಾರಿ ಡಾ.ಆನಂದ್ ಅವರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ.
ಮಲೆನಾಡು ತಳಿಯ ಈ ಹಸುಕೆಲ ದಿನಗಳಿಂದ ಮೇವು ತಿನ್ನದೇ, ಮೆಲುಕು ಹಾಕದೇ ಹೊಟ್ಟೆ ಉಬ್ಬರಿಸಿತ್ತು. ಡಾ.ಆನಂದ್ ಪರೀಕ್ಷಿಸಿ ಶಸ್ತ್ರಚಿಕಿತ್ಸೆ ನಡೆಸಿದ್ದು, 40 ಕೆ.ಜಿ.ಗೂ ಹೆಚ್ಚು ಮೇವು ರಸಮಿಶ್ರಿತ ಗಟ್ಟಿಯಾದ ಪ್ಲಾಸ್ಟಿಕ್ ಅನ್ನು ಹೊರ ತೆಗೆದಿದ್ದಾರೆ.
‘ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಮತ್ತು ಕಸವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಜಾನುವಾರು ಇಂತಹ ಆಪತ್ತಿಗೆ ಸಿಲುಕುತ್ತವೆ. ಜನರು ಪರಿಸರಕ್ಕೆ ಹಾನಿಯಾದ ಪ್ಲಾಸ್ಟಿಕ್ ಅನ್ನು ಮಿತಿಯಲ್ಲಿ ಬಳಸಬೇಕು. ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಮೂಕ ಪ್ರಾಣಿಗಳ ಜೀವಕ್ಕೆ ಸಂಚಕಾರ ತರದಂತೆ ಎಚ್ಚರ ವಹಿಸಬೇಕು’ ಎಂದೂ ಡಾ.ಆನಂದ ಸಲಹೆ ನೀಡಿದ್ದಾರೆ.