ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಬಿ ಪ್ರಕರಣ: ವರ್ಗಾವಣೆ ಬೆದರಿಕೆ ಬಂದಿದೆ – ನ್ಯಾ.ಸಂದೇಶ್ ಆರೋಪ

ಸರ್ಕಾರವೂ ಅಪರಾಧದ ಭಾಗ – ನ್ಯಾ.ಸಂದೇಶ್ ಆರೋಪ
Last Updated 5 ಜುಲೈ 2022, 15:28 IST
ಅಕ್ಷರ ಗಾತ್ರ

ಬೆಂಗಳೂರು: ‘ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಚೇರಿಗಳು ವಸೂಲಿ ಕೇಂದ್ರಗಳಾಗಿವೆ ಎಂದು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ, ನಿನ್ನ ವರ್ಗಾವಣೆಯಾದೀತು ಹುಷಾರಾಗಿರು ಎಂದು ನ್ಯಾಯಮೂರ್ತಿಯೊಬ್ಬರು ನನಗೆ ಬೆದರಿಕೆ ಒಡ್ಡಿದ್ದಾರೆ’ ಎಂಬ ಗಂಭೀರ ಆರೋಪ ಮಾಡಿರುವ ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌, ‘ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ’ ಎಂದು ಗುಡುಗಿದ್ದಾರೆ.

‘ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಪಿ.ಎಸ್‌. ಮಹೇಶ್‌ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಸಂದೇಶ್‌, ‘ಸಾಂವಿಧಾನಿಕ ಹುದ್ದೆ ನಿಭಾಯಿಸುವ ನ್ಯಾಯಮೂರ್ತಿಗಳು ಯಾವುದೇ ಪಕ್ಷದ ಸಿದ್ಧಾಂತದ ಪರವಾಗಿ ಇರಬಾರದು. ರಾಜ್ಯ ಸರ್ಕಾರ ಐಎಎಸ್‌ ಮತ್ತು ಐಪಿಎಸ್‌ ಲಾಬಿಯ ಆಣತಿಯಂತೆ ನಡೆಯುತ್ತಿದ್ದು ಸರ್ಕಾರವೂ ಅಪರಾಧದ ಭಾಗವಾಗಿದೆ’ ಎಂದು ಆರೋಪಿಸಿದರು.

ಬೆಳಗಿನ ಕಲಾಪದಲ್ಲಿ, ‘ನನಗೆ ವರ್ಗಾವಣೆ ಬೆದರಿಕೆ ಹಾಕಿದ ನ್ಯಾಯಮೂರ್ತಿ ಯಾರು ಎಂಬ ವಿವರವನ್ನೆಲ್ಲಾ ಮಧ್ಯಾಹ್ನದ ಕಲಾಪದಲ್ಲಿ ಆದೇಶದಲ್ಲೇ ಬರೆಯಿಸಿ ತೀರುತ್ತೇನೆ’ ಎಂದು ಪಟ್ಟು ಹಿಡಿದಿದ್ದರು. ಮಧ್ಯಾಹ್ನ ಕಲಾಪ ಮುಂದುವರಿದಾಗ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಹಾಜರಾಗಿ, ‘ಸರ್ಕಾರ ಯಾರನ್ನೂ ರಕ್ಷಣೆ ಮಾಡುತ್ತಿಲ್ಲ. ನಿಮಗೆ ನೋವು ಎನಿಸಿದ್ದರೆ ಅದು ನಮಗೇನೂ ಖುಷಿ ಉಂಟು ಮಾಡುವ ಸಂಗತಿಯಾಗಿರುವುದಿಲ್ಲ. ಆದ್ದರಿಂದ, ತಾವು ಯಾವುದಕ್ಕೂ ಬೇಸರ ಮಾಡಿಕೊಳ್ಳಬಾರದು. ಎಸಿಬಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನೂ ನೀಡುತ್ತೇವೆ. ಬಿ ರಿಪೋರ್ಟ್‌ನ ಸಂಪೂರ್ಣ ಮಾಹಿತಿಯನ್ನೂ ಕೊಡುತ್ತೇವೆ. ಸರ್ಕಾರ ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ’ ಎಂಬ ಭರವಸೆ ನೀಡಿದರು.

ಇದಕ್ಕೆ ಸಂದೇಶ್‌, ‘ನನಗೆ ವರ್ಗಾವಣೆಯ ಪರೋಕ್ಷ ಬೆದರಿಕೆ ಹಾಕಲಾಗಿದೆ. ನಾನೀಗ ನ್ಯಾಯಾಂಗದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕಿದೆ.ಜಡ್ಜ್ ಆದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ವರ್ಗಾವಣೆ ಬೆದರಿಕೆ ಎದುರಿಸುತ್ತೇನೆ. ಜನರ ಒಳಿತಿಗಾಗಿ ವರ್ಗಾವಣೆಯಾಗಲು ಸಿದ್ಧನಿದ್ದೇನೆ, ನನಗೆ ₹ 500ರಲ್ಲಿ ಜೀವನ ಮಾಡಿಯೂ ಗೊತ್ತು, ₹ 5,000ದಲ್ಲಿ ಜೀವನ ಮಾಡಿಯೂ ಗೊತ್ತು. ಯಾರ ಹೆದರಿಕೆಯೂ ಇಲ್ಲ, ಬೆಕ್ಕಿಗೆ ಗಂಟೆ ಕಟ್ಟಲು ಸಿದ್ದನಿದ್ದೇನೆ. ಇವತ್ತು ಭ್ರಷ್ಟಾಚಾರ ಸಮಾಜದಲ್ಲಿ ಕ್ಯಾನ್ಸರ್‌ ಆಗಿ ಪರಿಣಮಿಸಿದೆ’ ಎಂದರು.

ಬೆಳಗಿನ ಕಲಾಪದಲ್ಲಿ ತಾವು ಹೇಳಿದಂತೆ ಎಲ್ಲವನ್ನೂ ಮಧ್ಯಾಹ್ನದ ಕಲಾಪದಲ್ಲಿ ಆದೇಶದಲ್ಲಿ ಬರೆಯಿಸಲು ಮುಂದಾಗುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ನಾವದಗಿ, ‘ತಾವು ಎಲ್ಲವನ್ನೂ ಆದೇಶದಲ್ಲಿ ಕಾಣಿಸುವ ಅವಶ್ಯಕತೆ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲುಪ್ತವಾಗಿ ನಿರ್ದೇಶನ ನೀಡಿದರೆ ಸಾಕು’ ಎಂದು ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳು, ಜಿಲ್ಲಾಧಿಕಾರಿ ಮಂಜುನಾಥ್‌ ಅವರ ಸೇವಾ ದಾಖಲೆಯನ್ನು ಹಾಜರುಪಡಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಇದೇ 7ಕ್ಕೆ ಮುಂದೂಡಿದರು.

ಆನೇಕಲ್‌ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಅನುಕೂಲಕರ ಆದೇಶ ನೀಡಲು ಬೇಗೂರು ನಿವಾಸಿ ಅಜಂ ಪಾಷಾ ಎಂಬುವರಿಂದ ₹ 5 ಲಕ್ಷ ಲಂಚ ಪಡೆಯಲಾಗಿದೆ ಎಂಬ ಪ್ರಕರಣದಲ್ಲಿ ಅರ್ಜಿದಾರ ಮಹೇಶ್‌ ಆರೋಪಿಯಾಗಿದ್ದಾರೆ. ಎಸಿಬಿ ಪರ ಪಿ.ಎನ್‌.ಮನಮೋಹನ್‌ ಮತ್ತು ಅರ್ಜಿದಾರ ಮಹೇಶ್‌ ಪರ ಹಿರಿಯ ವಕೀಲ ಎ.ಎಸ್‌.ಪೊನ್ನಣ್ಣ ಹಾಜರಾಗಿದ್ದರು.

‘ಅಪ್ರಾಮಾಣಿಕರು ಜಡ್ಜ್‌ಗಳಾಗಲು ನಾಲಾಯಕ್‌’

‘ನ್ಯಾಯಾಂಗದ ಸಮಗ್ರತೆ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಬೇಕು. ಇಲ್ಲವಾದರೆ ಅಂತಹವರು ಜಡ್ಜ್‌ಗಳಾಗಲು ನಾಲಾಯಕ್‌. ನಾನು ನಿವೃತ್ತಿ ಆದ ಮೇಲೆ, ನ್ಯಾಯಾಂಗ ಸೈನಿಕರನ್ನು ತಯಾರು ಮಾಡುತ್ತೇನೆ. ಕಳೆದ 20 ವರ್ಷಗಳಿಂದ ಅಕಾಡೆಮಿಯಲ್ಲಿ ಪಾಠ ಮಾಡುತ್ತಿದ್ದು, ಖಾಸಗಿ ಅಕಾಡೆಮಿ ಶುರು ಮಾಡುತ್ತೇನೆ. ಗ್ರಾಮೀಣ ಪ್ರದೇಶದಿಂದ ಬರುವ ವಕೀಲರನ್ನು ನ್ಯಾಯಾಧೀಶರಾಗಲು ತಯಾರು ಮಾಡುತ್ತೇನೆ’ ಎಂದು ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಹೇಳಿದರು.

ಸರ್ಚ್‌ ವಾರೆಂಟ್ ತೋರಿಸಿ ವಸೂಲಿ: ಹಳೆಯ ಪ್ರಕರಣವೊಂದನ್ನು ಪ್ರಸ್ತಾಪಿಸಿದ ಸಂದೇಶ್‌, ‘ಐಎಎಸ್ ಅಧಿಕಾರಿ ಮನೆ ಮೇಲಿನ ದಾಳಿಯಲ್ಲಿ ನಾಲ್ಕೂವರೆ ಕೋಟಿ ಹಣ ಸಿಗುತ್ತೆ. 5 ಕೆಜಿ ಚಿನ್ನ ಸಿಗುತ್ತದೆ. ಕೇಸಿನಲ್ಲಿ ಬಿ ರಿಪೋರ್ಟ್ ಹಾಕಿದಾಗ, ಬಿ ರಿಪೋರ್ಟ್ ಹಾಕಿದ್ದೇಕೆ ಎಂದು ಪ್ರಶ್ನಿಸಿದ ನ್ಯಾಯಾಧೀಶರು ವರ್ಗಾವಣೆಯಾಗುತ್ತಾರೆ. ಮತ್ತೊಬ್ಬ ನ್ಯಾಯಾಧೀಶರು ಬಂದ ಮೇಲೆ ಬಿ ರಿಪೋರ್ಟ್ ಅಂಗೀಕೃತವಾಗುತ್ತದೆ. ಇಂತಹ ಘಟನೆಗಳು ನೋವು ತರಿಸುತ್ತವೆ. ರೆಡ್ ಹ್ಯಾಂಡ್ ಆಗಿ ಲಂಚ ಸಮೇತ ಸಿಕ್ಕಿಬಿದ್ದಿದ್ದರೂ ಬಿ ರಿಪೋರ್ಟ್ ಹೇಗೆ ಹಾಕ್ತಾರೆ. ಸರ್ಚ್ ವಾರೆಂಟ್ ತೆಗೆದುಕೊಂಡರೂ ಸರ್ಚ್ ಮಾಡುವುದಿಲ್ಲ. ಸರ್ಚ್ ವಾರೆಂಟ್ ತೋರಿಸಿಯೇ ವಸೂಲಿ ಮಾಡುತ್ತಾರೆ’ ಎಂದರು.

ಬೇಲಿಯೇ ಎದ್ದು ಹೊಲ ಮೇಯುತ್ತಿದೆ: ‘ರಾಜ್ಯದಲ್ಲಿ ಏನು ನಡೆಯುತ್ತಿದೆ.ಅಡ್ವೊಕೇಟ್‌ ಜನರಲ್ ಅವರೇ, ಜಿಲ್ಲಾಧಿಕಾರಿ ಕಚೇರಿಯಲ್ಲಿ ದುಡ್ಡು ಕಲೆಕ್ಷನ್ ಮಾಡಲು ಖಾಸಗಿ ವ್ಯಕ್ತಿಯನ್ನು ನೇಮಿಸಿಕೊಳ್ಳಲಾಗುತ್ತದೆ, ಖಾಸಗಿ ಪಿಎ ಡಿಸಿ ಹತ್ರ ಎಲ್ಲ ಮಾಡಿಸಿಕೊಡುತ್ತೇನೆ ಎಂದರೆ ಅದರರ್ಥ ಏನು, ಇವೆಲ್ಲಾ ಸಂಭಾಷಣೆ ಫೋನ್‌ನಲ್ಲಿ ರೆಕಾರ್ಡ್ ಆಗಿವೆ. ಡಿಸಿ ಒಪ್ಪಿಗೆ ಇಲ್ಲದೆಯೇ ಆತ ₹ 5 ಲಕ್ಷ ಲಂಚ ಪಡೆಯಲು ಸಾಧ್ಯವೇ. ಬೇಲಿಯೇ ಎದ್ದು ಹೊಲ ಮೇಯುತ್ತಿದೆಯಲ್ಲವೇ’ ಎಂದು ಸಂದೇಶ್‌ ಪ್ರಶ್ನಿಸಿದರು.

400 ಪಿಎಸ್‌ಐ ಹುದ್ದೆ ವ್ಯಾಪಾರ: ‘ಇದೇ ವೇಳೆ ಪಿಎಸ್ಐ ಪ್ರಕರಣದ ವಿಚಾರಣೆಯನ್ನೂ ನಡೆಸುತ್ತಿರುವ ಸಂದೇಶ್‌, ‘545 ಪೋಸ್ಟ್‌ಗಳಲ್ಲಿ 400 ಪೋಸ್ಟ್‌ಗಳ ವ್ಯಾಪಾರ ಮಾಡಲಾಗಿದೆ. ಇವರೆಲ್ಲಾ ನೇಮಕವಾದ ಮೇಲೆ ಜನರ ರಕ್ತ ಕುಡಿಯುತ್ತಾರೆ. ಇದನ್ನೆಲ್ಲಾ ತಡೆಯದೇ ಹೋದರೆ ಕಷ್ಟವಾಗುತ್ತದೆ. ರಾಜ್ಯಕ್ಕೆ ಅವಮಾನ ಆಗುತ್ತಿದ್ದರೂ ನೀವು ಐಎಎಸ್‌ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿದ್ದೀರಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT