ಗೋಣಿಕೊಪ್ಪಲು: ತರಕಾರಿ ಚೀಲದೊಂದಿಗೆ ಅಕ್ರಮವಾಗಿ ಮದ್ಯ ಬಾಟಲ್ ತುಂಬಿಸಿಕೊಂಡು ಕೇರಳಕ್ಕೆ ಹೋಗುತ್ತಿದ್ದ ವಾಹನವನ್ನು ಪತ್ತೆ ಹಚ್ಚಿದ ಗೋಣಿಕೊಪ್ಪಲು ಪೊಲೀಸರು ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಕೇರಳದ ಇರಟಿಯ ಅನೂಪ್ ಹಾಗೂ ಉದಯ ಕುಮಾರ್ ಬಂಧಿತರು.
ಹುಣಸೂರಿನಿಂದ ತರಕಾರಿ ತುಂಬಿದ ಲಾರಿಯಲ್ಲಿ ತಲಾ ಒಂದು ಲೀಟರಿನ ಓಲ್ಡ್ ಅಡ್ಮಿರಲ್ ಕಂಪನಿಯ 212 ಬಾಟಲ್, ಬಿಜಾಯ್ಸ್ ಕಂಪನಿಯ 78 ಬಾಟಲ್ ಸೇರಿದಂತೆ ಒಟ್ಟು 290 ಮದ್ಯದ ಬಾಟಲ್ ಗಳನ್ನು ಶೇಖರಿಸಿದ್ದರು ಎನ್ನಲಾಗಿದೆ.
ಆನೆ ಚೌಕೂರು ಗೇಟಿನ ಬಳಿ ಲಾರಿ ಬಂದಾಗ ತಪಾಸಣೆ ನಡೆಸಿದ ಪೊಲೀಸರಿಗೆ ಪ್ರಕರಣ ಪತ್ತೆಯಾಗಿದೆ. ಡಿವೈಎಸ್ಪಿ ಜಯಕುಮಾರ್ ಅವರ ನಿರ್ದೇಶನದ ಮೇರೆಗೆ ಕೂಡಲೆ ಸ್ಥಳಕ್ಕೆ ಧಾವಿಸಿದ ಗೋಣಿಕೊಪ್ಪಲು ಸಿಪಿಐ ಜಯರಾಮ್, ಪಿಎಸ್ ಐ ಸುಬ್ಬಯ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದರು.
ಅಂದಾಜು ₹1.20ಲಕ್ಷ ಮೌಲ್ಯದ ಮದ್ಯ ಇದೆ ಎಂದು ಸಿಪಿಐ ಜಯರಾಮ್ ತಿಳಿಸಿದರು. ಎಎಸ್ ಐ ದೇವರಾಜು, ಸಿಬ್ಬಂದಿ ರಾಘವೇಂದ್ರ, ಉಮೇಶ್, ಶೇಖರ್ ಕಾರ್ಯಾಚರಣೆ ತಂಡದಲ್ಲಿದ್ದರು.