ನಿಪ್ಪಾಣಿ: ‘ಗಡಿ ವಿಚಾರವಾಗಿ ನಡೆದ ಬೆಳವಣಿಗೆಗಳ ಕಾರಣ ನಿಷೇಧಾಜ್ಞೆ ಜಾರಿ ಮಾಡುವಂಥ ಅವಶ್ಯಕತೆ ಇನ್ನೂ ಬಿದ್ದಿಲ್ಲ. ನ.30ರಂದು ಸುಪ್ರೀಂಕೋರ್ಟ್ನ ತೀರ್ಪು ಏನು ಬರುತ್ತದೋ ಅದನ್ನು ನೋಡಿಕೊಂಡು ನಿರ್ಧಾರ ಮಾಡಲಾಗುವುದು’ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ನಗರದಲ್ಲಿ ಮಂಗಳವಾರ ನಡೆದ ಅಂತರರಾಜ್ಯ ಗಡಿ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ‘ಯಾರಿಗಾದರೂ ಸಮಸ್ಯೆಗಳಿದ್ದಲ್ಲಿ ಪೊಲೀಸರೊಂದಿಗೆ ಚರ್ಚಿಸಿ. ಕಾನೂನು ಯಾರೂ ಮೀರಬೇಡಿ’ ಎಂದರು.
‘ಎರಡೂ ರಾಜ್ಯಗಳಲ್ಲಿ ಬಸ್ಗಳ ಮೇಲೆ ಮಸಿ ಬಳಸುವುದು, ಕಲ್ಲು ತೂರುವುದು ನಡೆದಿದೆ. ಸಾಂಗ್ಲಿಯಲ್ಲಿ ರಾಜ್ಯದ ಬಸ್ಸುಗಳಿಗೆ ಕಲ್ಲು ತೂರಿದ ಪ್ರಸಂಗ ಸೇರಿದಂತೆ ಮೂರು ಕಡೆ ಪ್ರಕರಣ ದಾಖಲಾಗಿವೆ. ಮಹಾರಾಷ್ಟ್ರ ಪೊಲೀಸರಿಗೆ ಮನವರಿಕೆ ಮಾಡಿದ್ದು ಭದ್ರತೆ ನೀಡುವಂತೆ ಹೇಳಲಾಗಿದೆ’ ಎಂದರು.
ಉತ್ತರ ವಲಯ ಐಜಿಪಿ ಎನ್.ಸತೀಶಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಡಿಸಿಪಿಗಳಾದ ರವೀಂದ್ರ ಗದಾಡಿ, ಪಿ.ಸ್ನೇಹಾ, ಡಿವೈಎಸ್ಪಿಗಳು, ಸಿಪಿಐಗಳು, ಪಿಎಸ್ಐಗಳು ಇದ್ದರು.
ಮಹಾರಾಷ್ಟ್ರದ ಸಾವಂತವಾಡಿ ವಿಭಾಗದಿಂದ ಡಿವೈಎಸ್ಪಿ ಡಾ.ರೋಹಿನಿ ಸಾಳುಂಖೆ, ಸಿಪಿಐ ಭೋಸಲೆ, ಮೊದಲಾದ ಅಧಿಕಾರಿಗಳು ಇದ್ದರು.
ನಂತರ ಎಡಿಜಿಪಿ ಅಲೋಕ್ ಕುಮಾರ್ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಕೊಗನೋಳಿ ಚೆಕ್ ಪೋಸ್ಟ್ಗೆ ತೆರಳಿ ಪರಿಶೀಲನೆ ನಡೆಸಿದರು.ಮಹಾರಾಷ್ಟ್ರದಿಂದ ಬರುವ ಪ್ರವಾಸಿಗರಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದರು.