ಬೆಂಗಳೂರು: ‘ರಾಜ್ಯದ ಯಾವುದೇ ಭಾಗದಲ್ಲೂ ಜನ ಬಂದ್ಗೆ ಸಹಕಾರ ಕೊಡುತ್ತಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಅನಗತ್ಯವಾಗಿ ಹೀಗೆ ಬಂದ್ ಕರೆ ಕೊಡುವ ಬದಲು, ವಾಸ್ತವ ಸ್ಥಿತಿ ಅರ್ಥ ಮಾಡಿಕೊಳ್ಳಬೇಕು’ ಎಂದರು.
‘ರಾಜ್ಯ ಸರ್ಕಾರ ಮತ್ತು ಕೇಂದ್ರದ ನರೇಂದ್ರ ಮೋದಿ ಸರ್ಕಾರ ರೈತರ ಪರವಾಗಿದೆ. ರೈತರಿಗೆ ಧಕ್ಕೆ ತರುವಂಥ ಕೆಲಸವನ್ನು ಎಂದೂ ಈ ದೇಶದ ಪ್ರಧಾನಿ ಮಾಡುವುದಿಲ್ಲ. ಇದು ಗೊತ್ತಿದ್ದೂ ಯಾವುದೊ ರಾಜಕೀಯ ಕಾರಣಕ್ಕಾಗಿ ಈ ರೀತಿ ಬಂದ್ ಕರೆ ನೀಡುವುದು ಸರಿಯಲ್ಲ. ಅದಕ್ಕೆ ಜನ ಸಹಕಾರ ನೀಡುವುದಿಲ್ಲ’ ಎಂದರು.
‘ಬೆಂಗಳೂರಿನಲ್ಲಾಗಲಿ, ರಾಜ್ಯದ ಇತರ ಭಾಗದಲ್ಲಿಯಾಗಲಿ ಜನ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ನಿರಂತರವಾಗಿ ಜನಜೀವನ ಸುಸೂತ್ರವಾಗಿ ನಡೆಯಬೇಕು. ಯಾರಾದರೂ ಅಡ್ಡಿ ಉಂಟು ಮಾಡಿದರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ’ ಎಂದರು.
ಕಾಂಗ್ರೆಸ್ ಶಾಸಕರು ಕಪ್ಪು ಬಟ್ಟೆ ಧರಿಸಿಕೊಂಡು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅವರು ಕಪ್ಪು ಬಟ್ಟೆಯಾದರೂ ಹಾಕಿಕೊಳ್ಳಲಿ, ಬಿಳಿ ಬಟ್ಟೆಯಾದರೂ ಹಾಕಿಕೊಳ್ಳಲಿ ಯಾರು ಕೇಳುತ್ತಾರೆ ಅವರನ್ನು’ ಎಂದು ವ್ಯಂಗ್ಯವಾಗಿ ಹೇಳಿದರು.