ಬೆಂಗಳೂರು: ಕರ್ನಾಟಕ ಕಾಂಗ್ರೆಸ್ಗೆ ಇಂದಿನಿಂದ ರಾಹುಕಾಲ ಆರಂಭ ಎಂದುಬಿಜೆಪಿ ಲೇವಡಿ ಮಾಡಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ‘ಭಾರತ್ ಜೋಡೊ ಯಾತ್ರೆ’ ಇಂದು ರಾಜ್ಯ ಪ್ರವೇಶಿಸಿದ್ದು, ರಾಜ್ಯದ ‘ಕೈ’ ನಾಯಕರು ಅದ್ದೂರಿ ಸ್ವಾಗತ ನೀಡಿದ್ದಾರೆ.
‘ಭಾರತ್ ಜೋಡೊ ಯಾತ್ರೆ’ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಇಂದು ರಾಜ್ಯದಲ್ಲಿ ರಾಹುಕಾಲ ಆರಂಭವಾಗಿದೆ. ದಿನನಿತ್ಯದ ನೆಮ್ಮದಿ ಮತ್ತು ಶಾಂತಿಗಾಗಿ ರಾಹು ಸಂಬಂಧಿತವಾದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುವಂತೆ ಜನಹಿತಕ್ಕಾಗಿ ಜಾರಿ’ ಎಂದು ವ್ಯಂಗ್ಯವಾಡಿದೆ.
ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ಹೊಂದಿದ್ದು, ದೇಶ ವಿಭಜಕರ ಜೊತೆ ಸಂಬಂಧ ಹೊಂದಿರುವ, ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದುಕೊಂಡು ‘ಭಾರತ್ ಜೋಡೊ ಯಾತ್ರೆ’ ಮಾಡುತ್ತಿರುವ ಭ್ರಷ್ಟ ಪರಿವಾರದ ನಕಲಿ ಗಾಂಧಿ ಕುಡಿ ರಾಹುಲ್ ಗಾಂಧಿ ಅವರಿಗೆ ಕರ್ನಾಟಕಕ್ಕೆ ಆತ್ಮೀಯ ಸ್ವಾಗತ’ ಎಂದು ಬಿಜೆಪಿ ಕಿಚಾಯಿಸಿದೆ.
ರಾಹುಲ್ ಗಾಂಧಿ ಮಾಡುತ್ತಿರುವುದು ಭಾರತ ಜೋಡೊ ಯಾತ್ರೆಯಲ್ಲ, ಎಐಸಿಸಿ ಮುಂದಿನ ಅಧ್ಯಕ್ಷ ಸ್ಥಾನವನ್ನು ನಕಲಿ ಗಾಂಧಿಗಳ ಕುಟುಂಬದಲ್ಲೇ ಇರಿಸಿಕೊಳ್ಳಲು ಮತ್ತು ನಿಯಂತ್ರಿಸಲು ನಡೆಸುತ್ತಿರುವ ಕಸರತ್ತು ಎಂದು ಬಿಜೆಪಿ ಆರೋಪಿಸಿದೆ.
ಅಪರಾಧ ಸೂಚ್ಯಂಕದ (NCRB Report) ಪ್ರಕಾರ, ತಮಿಳುನಾಡು - 422.1, ಕೇರಳ - 401.4, ರಾಜಸ್ಥಾನ - 269.6, ಕರ್ನಾಟಕ - 172.8 ರಷ್ಟಿದೆ. ರಾಹುಲ್ ಗಾಂಧಿ ಅವರೇ, ಅಪರಾಧ ಪ್ರಮಾಣ ಕಡಿಮೆ ಇರುವ ಕರ್ನಾಟಕಕ್ಕೆ ಸ್ವಾಗತ. ನಿಮ್ಮ ಶಾಂತಿಯ ಮಂತ್ರ ಕರುನಾಡಿಗೆ ಅಗತ್ಯವಿಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ರಾಹುಲ್ ಗಾಂಧಿ ಅವರೇ, ದಲಿತರ, ಪರಿಶಿಷ್ಟ ಪಂಗಡ ಸಮುದಾಯದವರು ಸುರಕ್ಷಿತವಾಗಿರುವ ಕರ್ನಾಟಕಕ್ಕೆ ಸ್ವಾಗತ. ಕಾಂಗ್ರೆಸ್ ಆಡಳಿತದ ರಾಜಸ್ತಾನದಲ್ಲಿ ದಲಿತರಿಗೆ ರಕ್ಷಣೆ ನೀಡಿ ಎಂದು ಬಿಜೆಪಿ ಗುಡುಗಿದೆ.
ಕಾಂಗ್ರೆಸ್ನ ಮಹತ್ವಾಕಾಂಕ್ಷೆಯ ಭಾರತ್ ಜೋಡೊ ಯಾತ್ರೆಯು ತಮಿಳುನಾಡು, ಕೇರಳ ಸಂಚಾರ ಮುಗಿಸಿ ಇಂದು ರಾಜ್ಯ ಪ್ರವೇಶಿಸಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಸುಮಾರು 511 ಕಿ.ಮೀಯಷ್ಟು ನಡೆಯಲಿದ್ದಾರೆ. ಒಟ್ಟು 21 ದಿನಗಳ ಕಾಲ ರಾಜ್ಯದಲ್ಲಿ ಯಾತ್ರೆ ಇರಲಿದೆ.
ಇಂದು ರಾಜ್ಯದಲ್ಲಿ ರಾಹುಕಾಲ ಆರಂಭದ ಸಮಯ ಬೆಳಿಗ್ಗೆ 10.30. ಆದುದರಿಂದ ದಿನನಿತ್ಯದ ನೆಮ್ಮದಿ ಮತ್ತು ಶಾಂತಿಗಾಗಿ ರಾಹು ಸಂಬಂಧಿತವಾದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುವಂತೆ ಜನಹಿತಕ್ಕಾಗಿ ಜಾರಿ.#Rahukaala#SonsOfTipu#BharatTodoYatra#GoBackRahul pic.twitter.com/V34xXY4d3u
— BJP Karnataka (@BJP4Karnataka) September 30, 2022
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.