ಬೆಂಗಳೂರು: ‘ನೆಹರೂ ಅವರು ಗಾಂಧೀಜಿಯವರ ಮಾತು ಕೇಳದೇ ದೇಶ ವಿಭಜನೆಗೆ ಕಾರಣರಾದವರು. ಆದ್ದರಿಂದ ಉದ್ದೇಶಪೂರ್ವಕವಾಗಿ ಅವರ ಭಾವಚಿತ್ರವನ್ನು ಸರ್ಕಾರಿ ಜಾಹೀರಾತಿನಲ್ಲಿ ಕೈಬಿಡಲಾಗಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಭಾನುವಾರ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಅನ್ನು ವಿಸರ್ಜಿಸಬೇಕು ಎಂದು ಗಾಂಧೀಜಿ ಹೇಳಿದ್ದರು. ಆದರೆ, ನೆಹರೂ ಅವರು ಕಾಂಗ್ರೆಸ್ ಅನ್ನು ವಿಸರ್ಜಿಸಲಿಲ್ಲ. ಈ ಎಲ್ಲ ಕಾರಣಗಳಿಂದ ಅವರ ಚಿತ್ರವನ್ನು ಜಾಹಿರಾತಿನಿಂದ ಕೈಬಿಟ್ಟಿ ದ್ದೇವೆ’ ಎಂದೂ ಸಮರ್ಥಿಸಿಕೊಂಡರು.
‘ಟಿಪ್ಪು ತನ್ನ ಆಳ್ವಿಕೆಯ ಸಂದರ್ಭದಲ್ಲಿ ಅನೇಕ ದೇವಾಲಯಗಳನ್ನು ಧ್ವಂಸ ಮಾಡಿದ್ದ, ಲಕ್ಷಾಂತರ ಜನರನ್ನು ಮತಾಂತರ ಮಾಡಿದ್ದ. ಹಿಂದೂ ಧರ್ಮ ವಿರೋಧಿ ಟಿಪ್ಪುವಿನ ಭಾವಚಿತ್ರವನ್ನು ಕಾಂಗ್ರೆಸ್ನವರು ಏಕೆ ಹಾಕಿದ್ದಾರೆ. ಇದು ಕಾಂಗ್ರೆಸ್ನ ವಿಚಿತ್ರ ನಡೆ’ ಎಂದೂ ಟೀಕಿಸಿದರು.
‘ಸಿದ್ದರಾಮಯ್ಯ ಅಧಿಕಾರ ಪಡೆಯಲು ಸೋನಿಯಾಗಾಂಧಿಯವರ ಕೈಗೊಂಬೆಯಾಗಿದ್ದಾರೆ. ಸೋನಿಯಾ ಮತ್ತು ರಾಹುಲ್ ಅವರು ಕೂತುಕೊಳ್ಳಿ ಎಂದರೆ ಕೂರಬೇಕು, ನಿಲ್ಲು ಎಂದರೆ ನಿಲ್ಲಬೇಕು. ಅಪ್ಪಿಕೊಳ್ಳಿ ಎಂದರೆ ಅಪ್ಪಿಕೊಳ್ಳಬೇಕು. ಇತ್ತೀಚೆಗೆ ರಾಹುಲ್ ಗಾಂಧಿ ಸೂಚಿಸಿದಾಗ ಸಿದ್ದರಾಮಯ್ಯ ಅವರನ್ನು ಡಿಕೆಶಿ ಅಪ್ಪಿಕೊಂಡರು ಎಂದು ರವಿಕುಮಾರ್ ಟೀಕಿಸಿದರು.