ಬಿಜೆಪಿಯ ರಾಜ್ಯ ಘಟಕದ ಅಧಿಕೃತ ಟ್ವಿಟರ್ ಖಾತೆಯಿಂದ ಈ ಕುರಿತು ಶನಿವಾರ ಸರಣಿ ಟ್ವೀಟ್ ಮಾಡಿದ್ದು, ‘ಇಷ್ಟು ವರ್ಷಗಳ ಕಾಲ ಜನ್ಮದಿನವನ್ನು ಆಚರಿಸಿಕೊಳ್ಳದ ಸಿದ್ದರಾಮಯ್ಯ ಈಗ ರಾಜಕೀಯ ಲಾಭಕ್ಕಾಗಿ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬುವುದು ಹಾಗೂ ವಿಧಾನಸಭಾ ಚುನಾವಣೆ ಎದುರಾಗುತ್ತಿರುವುದು ಕಾಕತಾಳೀಯ ಅಲ್ಲ. ಇದು ವ್ಯವಸ್ಥಿತವಾದ ರಾಜಕೀಯ ಟೂಲ್ ಕಿಟ್. ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ, ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ ಸೇರಿದಂತೆ ಮೂಲ ಕಾಂಗ್ರೆಸ್ಸಿಗರನ್ನು ಮಟ್ಟ ಹಾಕುವ ರಹಸ್ಯ ಕಾರ್ಯಸೂಚಿ ಇದರ ಹಿಂದಿದೆ’ ಎಂದು ವಾಗ್ದಾಳಿ ನಡೆಸಲಾಗಿದೆ.