ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿಗೇ ನಾಯಕತ್ವ: ಬಿಎಸ್‌ವೈ–ಶೆಟ್ಟರ್ ಅತೃಪ್ತಿ, ಭುಗಿಲೆದ್ದ ಅಸಮಾಧಾನ

Last Updated 4 ಸೆಪ್ಟೆಂಬರ್ 2021, 19:48 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲಾಗುವುದು’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಬಿಜೆಪಿಯಲ್ಲಿ ಅತೃಪ್ತಿಯ ಹೊಗೆ ಎಬ್ಬಿಸಿದೆ.

ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಮಿತ್ ಶಾ, ಬೊಮ್ಮಾಯಿ ಆಡಳಿತ ವೈಖರಿಗೆ ಮೆಚ್ಚುಗೆ ಸೂಚಿಸಿದ್ದಲ್ಲದೇ, ಅವರ ನೇತೃತ್ವದಲ್ಲೇ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಶಾ ಮಾತಿಗೆ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸಲಾಗುವುದು ಎಂದು ಪ್ರತಿಪಾದಿಸಿದ್ದರು. ಒಂದು ತಿಂಗಳ ಕಾರ್ಯವೈಖರಿ ನೋಡಿಕೊಂಡು ಪಾಸೋ, ಫೇಲೋ ಎಂದು ಎಂದು ಹೇಳುವುದು ಕಷ್ಟ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದ್ದರು.

ಈ ಬೆಳವಣಿಗೆಯ ಬೆನ್ನಲ್ಲೇ ಬಿಜೆ‍ಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಶನಿವಾರ ಭೇಟಿಯಾದ ಜಗದೀಶ ಶೆಟ್ಟರ್ ಅವರು, ಅರ್ಧತಾಸಿಗೂ ಹೆಚ್ಚು ಹೊತ್ತು ಚರ್ಚಿಸಿದರು. ಯಡಿಯೂರಪ್ಪ ಜತೆ ತುಸು ಅಂತರ ಕಾಯ್ದುಕೊಂಡೇ ಬಂದಿದ್ದ ಶೆಟ್ಟರ್, ಈಗ ದಿಢೀರ್ ಭೇಟಿಯಾಗಿರುವುದು ಬಿಜೆಪಿ ಪಾಳೆಯದಲ್ಲಿ ಚರ್ಚೆಗೂ ಕಾರಣವಾಗಿದೆ.

ಮಾತುಕತೆಯ ಹೂರಣ: ಚುನಾವಣೆಗೆ ಸುಮಾರು ಒಂದು ಮುಕ್ಕಾಲು ವರ್ಷ ಇರುವಾಗ ಅಮಿತ್ ಶಾ ಏಕೆ ಈ ರೀತಿ ಘೋಷಣೆ ಮಾಡಿದರು ಎಂಬುದು ಯಡಿಯೂರಪ್ಪ–ಶೆಟ್ಟರ್ ಮಾತುಕತೆಯ ಪ್ರಧಾನ ಕೇಂದ್ರವಾಗಿತ್ತು ಎಂದು ಮೂಲಗಳು ಹೇಳಿವೆ.

‘ಬಿಜೆಪಿ/ ಸಂಘ ಪರಿವಾರದ ಸಿದ್ಧಾಂತದ ಬಗ್ಗೆ ಆಳವಾದ ಜ್ಞಾನ ಇಲ್ಲದೇ ಹೊರಗಿನಿಂದ ಬಂದ ಬೊಮ್ಮಾಯಿಯವರಿಗೆ ಏಕಾಏಕಿ ಪರಮೋಚ್ಛ ಹುದ್ದೆ ನೀಡಿರುವುದನ್ನು ಪಕ್ಷದ ವಿವಿಧ ಹಂತಗಳ ನಾಯಕರು, ಕಾರ್ಯಕರ್ತರು ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೊರಗಿನಿಂದ ಬಂದವರಿಗೆ ಪಕ್ಷದ ಉನ್ನತ ಹುದ್ದೆ ಅಥವಾ ಆಯಕಟ್ಟಿನ ಖಾತೆ ನೀಡುವ ಬಗ್ಗೆ ಯಾರ ತಕರಾರು ಇಲ್ಲ. ಆರೆಸ್ಸೆಸ್‌ನಿಂದ ಬಂದವರು ಹಾಗೂ ಪಕ್ಷಕ್ಕಾಗಿ ಜೀವ ತೇದವರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬುದು ಸಾಮಾನ್ಯ ಅಭಿಪ್ರಾಯವಾಗಿತ್ತು. ಇಂತಹ ಅಸಮಾಧಾನಗಳು ಶಮನವಾಗಿ, ಬೊಮ್ಮಾಯಿ ಅವರನ್ನು ಎಲ್ಲರೂ ಒಪ್ಪಿಕೊಳ್ಳುವುದಕ್ಕೆ ಶುರುಮಾಡಿದ್ದರು. ಈ ಹೊತ್ತಿನಲ್ಲಿ, ಅಮಿತ್ ಶಾ ಅವರ ಹೇಳಿಕೆ ಕೆಲವರ ಸಿಟ್ಟಿಗೆ ಕಾರಣವಾಗಿದೆ. ಅಮಿತ್ ಶಾ ಏಕೆ ಹೀಗೆ ಹೇಳಿದರು. ಇದು ಸರಿಯಾದ ಕ್ರಮವಲ್ಲ’ ಎಂದು ಶೆಟ್ಟರ್ ಅವರು ಯಡಿಯೂರಪ್ಪನವರ ಬಳಿ ಚರ್ಚಿಸಿದರು ಎಂದು ಗೊತ್ತಾಗಿದೆ.

‘ಚುನಾವಣೆಗೆ ಇನ್ನೂ ಬಹಳ ಸಮಯವಿದೆ. ಈ ಹೊತ್ತಿನಲ್ಲಿ ಇಂತಹ ಘೋಷಣೆ ಮಾಡಿರುವುದು ಪಕ್ಷದ ಮೂಲ ಕಾರ್ಯಕರ್ತರ ಭರವಸೆ ಕುಂದಿಸಿ, ವಿಶ್ವಾಸವನ್ನು ಧೃತಿಗೆಡಿಸಲಿದೆ’ ಎಂದು ಯಡಿಯೂರಪ್ಪ ಹೇಳಿದರು.

‘ದಿಢೀರ್‌ ರಾಜಕೀಯ ಬೆಳವಣಿಗೆಯಲ್ಲಿ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಿರುವುದು ತಪ್ಪಲ್ಲ ಎಂದು ಒಪ್ಪಿಕೊಳ್ಳೋಣ. ಮುಂದಿನ ಚುನಾವಣೆಗೂ ಅವರದ್ದೇ ನಾಯಕತ್ವ ಎನ್ನುವುದಾದರೆ ಪಕ್ಷದ ಸಿದ್ಧಾಂತ, ಹಿಂದುತ್ವದ ಪ್ರತಿಪಾದನೆ ಮಾಡಿಕೊಂಡು ಸಂಘಟನೆಯನ್ನು ಬಲಪಡಿಸಿದವರು ಸುಮ್ಮನೇ ಕೂರಬೇಕೆ?’ ಎಂದು ನನಗೆ ದೂರವಾಣಿ ಕರೆ ಮಾಡಿದ ಅನೇಕರು ಪ್ರಶ್ನಿಸುತ್ತಿದ್ದಾರೆ. ಅವರಿಗೆಲ್ಲ ಏನು ಸಮಜಾಯಿಷಿ ಕೊಡುವುದು’ ಎಂದು ಶೆಟ್ಟರ್‌ ಪ್ರಶ್ನಿಸಿದ್ದಾಗಿ ಮೂಲಗಳು ವಿವರಿಸಿವೆ.

‘ಈ ಹೇಳಿಕೆಗೆ ಕಾರಣವೇನು ಎಂಬುದು ಗೊತ್ತಾಗುತ್ತಿಲ್ಲ. ಹಾಗೊಂದು ವೇಳೆ ಘೋಷಣೆ ಮಾಡಲೇಬೇಕೆಂದಿದ್ದರೆ ಅಮಿತ್ ಶಾ ಅವರು ಪಕ್ಷದ ರಾಜ್ಯ ಮಟ್ಟದ ನಾಯಕರ ಜತೆ ಸಮಾಲೋಚನೆ ನಡೆಸಬಹುದಿತ್ತು. ಕಾಲ ಇನ್ನೂ ಮಿಂಚಿಲ್ಲ. ಸ್ವಲ್ಪ ಸಮಾಧಾನದಿಂದ ಎಲ್ಲವನ್ನೂ ಗಮನಿಸೋಣ’ ಎಂದು ಯಡಿಯೂರಪ್ಪ ಹೇಳಿದ್ದಾಗಿ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT