ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿ ನಡೆದ ಬಸ್ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡಿದ್ದ ಶಿವಮೊಗ್ಗದ ಸಹನಾ ಅವರಿಗೆ ಲೋಕ ಅದಾಲತ್ನಲ್ಲಿ ₹ 80 ಲಕ್ಷ ಪರಿಹಾರ ದೊರಕಿತು.
ದೂರುದಾರರು, ವಿಮಾ ಕಂಪನಿಗಳ ಮುಖ್ಯಸ್ಥರ ನಡುವೆ ನಡೆದ ಸಂಧಾನದ ಫಲವಾಗಿ ಈ ಆದೇಶ ಹೊರಡಿಸಲಾಗಿದೆ. ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ಅತಿ ಹೆಚ್ಚು ಮೊತ್ತ ಘೋಷಿಸಿದ ವಿಶೇಷ ಪ್ರಕರಣವಿದು.
ದೂರುದಾರರು ವಿಮಾ ಕಂಪನಿಯಿಂದ ₹ 1.20 ಕೋಟಿ ಪರಿಹಾರಕ್ಕೆ ಮನವಿ ಮಾಡಿದ್ದರು. ಸಂಧಾನದ ನಂತರ ನಿಗದಿತ ಮೊತ್ತ ಪಡೆಯಲು ಒಪ್ಪಿಗೆ ಸೂಚಿಸಿದರು ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮುಸ್ತಫಾ ಹುಸೇನ್ ಶನಿವಾರ ಮಾಹಿತಿ ನೀಡಿದರು.
ಈ ಬಾರಿಯ ಲೋಕ ಅದಾಲತ್ನಲ್ಲಿ ಮೋಟಾರು ವಾಹನಗಳ 125ಕ್ಕೂ ಹೆಚ್ಚಿನ ಪ್ರಕರಣಗಳು ಇತ್ಯರ್ಥಗೊಂಡಿವೆ. ಕೊರೊನಾ ಸೋಂಕಿನ ನಂತರ ನಿಧಾನವಾಗಿದ್ದ ನ್ಯಾಯಾಲಯದ ಚಟುವಟಿಕೆ ಚುರುಕುಗೊಳ್ಳುತ್ತಿವೆ. ಹೊಸ ಪ್ರಕರಣಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ ಎಂದರು.