ಬೆಂಗಳೂರು: ಪಕ್ಷದ ವರಿಷ್ಠರ ಜತೆ ಚರ್ಚಿಸಿ ವಾರದಲ್ಲೇ ಸಂಪುಟ ರಚನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ವಲಸಿಗರು, ಮೂಲ ಎಂಬ ಪ್ರಶ್ನೆಯೇ ಇಲ್ಲ. ಪ್ರಾದೇಶಿಕತೆ, ಸಾಮಾಜಿಕ ನ್ಯಾಯ ಎಲ್ಲವನ್ನೂ ಪರಿಶೀಲಿಸಿ ಸಂಪುಟದಲ್ಲಿ ಸ್ಥಾನ ನೀಡಲಾಗುವುದು ಎಂದು ಅವರು ಹೇಳಿದರು.
ಕುಟುಂಬದ ಸದಸ್ಯರೇ ಮುಖ್ಯಮಂತ್ರಿ ಆದಂತೆ ಆಗಿದೆ: ಅಶೋಕ
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿರುವುದರಿಂದ ನಮ್ಮ ಕುಟುಂಬದ ಸದಸ್ಯರೇ ಮುಖ್ಯಮಂತ್ರಿ ಆದಷ್ಟು ಸಂತೋಷವಾಗಿದೆ ಎಂದು ಮಾಜಿ ಸಚಿವ ಆರ್. ಅಶೋಕ ಹೇಳಿದರು.
ರಾಜಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 'ನಾನು ಮತ್ತು ಬೊಮ್ಮಾಯಿ ಸ್ನೇಹಿತರು. ಪಕ್ಷದ ಸೂಚನೆಯಂತೆ ಕೆಲಸ ಮಾಡುವೆ' ಎಂದರು.
ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸಲಿದೆ: ಎಸ್.ಟಿ. ಸೋಮಶೇಖರ್
ಸಂಪುಟದಲ್ಲಿ ಸ್ಥಾನ ನೀಡುವ ಕುರಿತು ಬಿಜೆಪಿ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಊಹಾಪೋಹಗಳಿಗೆ ಉತ್ತರಿಸುವುದಿಲ್ಲ ಎಂದು ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ರಾಜಭವನದಲ್ಲಿ ಮಾತನಾಡಿದ ಅವರು, 'ಬೇರೆ ಪಕ್ಷಗಳಿಂದ ಬಿಜೆಪಿಗೆ ಬಂದಿದ್ದ ನಮಗೆ ಸಂಪುಟದಲ್ಲಿ ಸ್ಥಾನ ನೀಡುವ ಕುರಿತು ವದಂತಿಗಳಷ್ಟೇ ಇವೆ. ಅದರಲ್ಲಿ ಸತ್ಯಾಂಶ ಇಲ್ಲ' ಎಂದರು.
ಹೈಕಮಾಂಡ್ ನಮ್ಮ ಪರವಾಗಿದೆ ಎಂಬ ವಿಶ್ವಾಸವಿದೆ. ಯಾವುದೇ ಭಯವೂ ಇಲ್ಲ ಎಂದರು
ನನ್ನನ್ನು ಉಪ ಮುಖ್ಯಮತ್ರಿ ಮಾಡಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ: ಕೆ.ಎಸ್. ಈಶ್ವರಪ್ಪ.
ನನಗೆ ಆರ್ಶೀವಾದ ಮಾಡಲು ಸ್ವಾಮೀಜಿಗಳು ಮನೆಗೆ ಬಂದಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಬಿಡುತ್ತಾರೆ ಎಂದಾಗ ಹೊಸ ಮುಖ್ಯಮಂತ್ರಿ ಬಗ್ಗೆ ವಿಷಯ ಚರ್ಚೆ ಆರಂಭವಾಯಿತು. ಯಡಿಯೂರಪ್ಪ ಬದಲಾದರೆ ನನ್ನನ್ನು ಮುಖ್ಯಮಂತ್ರಿ ಮಾಡಿ, ಅಲ್ಲದಿದ್ದರೆ ಉಪ ಮುಖ್ಯಮಂತ್ರಿ ಮಾಡಲಿ ಎಂದು ಸ್ವಾಮೀಜಿಗಳು ಬಯಸಿದ್ದರು. ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ನನ್ನನ್ನು ಉಪಮುಖ್ಯಮತ್ರಿ ಮಾಡಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನಿಸುತ್ತಾರೆ ಎಂದು ಸ್ವಾಮೀಜಿಗಳಿಗೆ ಭರವಸೆ ಸಿಕ್ಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.