ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ನಡೆದ ದಾಳಿ ರಾಜಕೀಯ ಉದ್ದೇಶದಿಂದ ಕೂಡಿಲ್ಲ. ಡಿ.ಕೆ. ಶಿವಕುಮಾರ್ ತನಿಖೆಗೆ ಒಳಗಾಗಲಿ. ಸೀತೆಯಂತೆ ಹೊರಗೆ ಬರಲಿ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಡಿ.ಕೆ. ಶಿವಕುಮಾರರ್ ಮನೆಯ ಮೇಲೆ ಈ ಹಿಂದೆ ಕೂಡಾ ದಾಳಿ ಆಗಿದೆ. ಇದು ಹೊಸದಲ್ಲ. ಹವಾಲಾ ಹಣ ಸಿಕ್ಕಿರುವ ಬಗ್ಗೆ ಹಿಂದಿನ ದಾಳಿಯಲ್ಲಿ ಗೊತ್ತಾಗಿತ್ತು. ಹೀಗಾಗಿ ತನಿಖೆ ನಡೆಯುತ್ತಿದೆ’ ಎಂದರು.
‘ರಾಜಕೀಯ ಪ್ರೇರಿತ ಎಂದು ಆರೋಪ ಮಾಡುವ ಕಾಂಗ್ರೆಸ್ ನಾಯಕರ ಹೇಳಿಕೆ ಕಂಡು ಆಶ್ಚರ್ಯ ಆಯಿತು. ಹಿಂದೆ ಯಡಿಯೂರಪ್ಪ ಮೇಲೂ ಸಹ ದಾಳಿ ಆಗಿತ್ತು. ಆಗ ಕಾಂಗ್ರೆಸ್ ನಾಯಕರು ಏನೆಂದು ಹೇಳಿಕೆ ಕೊಟ್ಟಿದ್ದರು. ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದಿದ್ದರು. ಕಾಂಗ್ರೆಸ್ಗೊಂದು ಕಾನೂನು ಬೇರೆ ಇದೆಯಾ’ ಎಂದೂ ಪ್ರಶ್ನಿಸಿದರು.