ಬೆಂಗಳೂರು: ನೆರೆ ಮತ್ತು ಬರ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಕಾಂಗ್ರೆಸ್ ಸದಸ್ಯರ ಟೀಕೆಗೆ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಉಭಯ ಸದಸ್ಯರ ಮಧ್ಯೆ ಅಂಕಿ–ಸಂಖ್ಯೆಗಳ ಸಮರ ನಡೆಯಿತು.
ಕಾಂಗ್ರೆಸ್ನ ಕೃಷ್ಣಬೈರೇಗೌಡ ಮಾತನಾಡುವಾಗ, ರಾಜ್ಯ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ₹395 ಕೋಟಿ ಕೊಟ್ಟಿರುವ ಕೇಂದ್ರವು ಕರ್ನಾಟಕವನ್ನು ನಿರ್ಲಕ್ಷಿಸಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್.ಅಶೋಕ, ಯುಪಿಎ ಅವಧಿಯಲ್ಲಿ ಎನ್ಡಿಆರ್ಎಫ್ ಅಡಿ ₹1,332 ಕೋಟಿ ಮತ್ತು ಎಸ್ಡಿಆರ್ಎಫ್ ಅಡಿ ₹724 ಕೋಟಿ ಮಾತ್ರ ನೀಡಿತ್ತು. ಎನ್ಡಿಎ ಸರ್ಕಾರ ಎನ್ಡಿಆರ್ಎಫ್ನಲ್ಲಿ ₹9,299 ಕೋಟಿ ಮತ್ತು ಎಸ್ಡಿಆರ್ಎಫ್ ನಲ್ಲಿ ₹2,669 ಕೋಟಿ ನೀಡಿದೆ ಎಂದು ಹೇಳಿದರು.
ಅಶೋಕ ಅವರು ಅಂಕಿ–ಸಂಖ್ಯೆ ಹೇಳುವಾಗ ಬಿಜೆಪಿ ಸದಸ್ಯರು ಶೇಮ್ ಶೇಮ್ ಎಂದು ಕೂಗಿದರು. ರಾಜ್ಯದಲ್ಲಿ ಆಗಿರುವ ಹಾನಿಗೆ ತಕ್ಕಂತೆ ಪರಿಹಾರ ನೀಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದಾಗ ಕಾಂಗ್ರೆಸ್ ಸದಸ್ಯರು ಶೇಮ್ ಶೇಮ್ ಎಂದು ಕೂಗಿದರು.
‘ನೈಸರ್ಗಿಕ ವಿಕೋಪದಲ್ಲಿ ಯಾರಿಗೇ ಆಗಲಿ ನಷ್ಟ ಆದಷ್ಟು ಯಾರೂ ಪರಿಹಾರ ಕೊಡುವುದಿಲ್ಲ. ಕೊಡಲು ಸಾಧ್ಯವೂ ಇಲ್ಲ. ಸಂಕಷ್ಟಕ್ಕೆ ತುತ್ತಾದವರು ಬದುಕು ಕಟ್ಟಿಕೊಳ್ಳಲಿ ಎಂಬ ಕಾರಣಕ್ಕೆ ಪರಿಹಾರ ನೀಡಲಾಗುತ್ತದೆ’ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು.