ಬೆಂಗಳೂರು: ‘ಬೊಮ್ಮಾಯಿ ಆರೆಸ್ಸೆಸ್ ಅಡಿಯಾಳಾಗಿದ್ದಾರೆ ಅನ್ನುತ್ತಾರೆ. ಆ ವಿಚಾರಕ್ಕೆ ನಾನು ತಲೆಬಾಗಿದ್ದೇನೆ. ಒಂದು ತತ್ವ, ಆದರ್ಶಕ್ಕೆ ದೇಶ ಕಟ್ಟಲು ನಾನು ಬದ್ಧನಾಗಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಜೆಪಿ ವತಿಯಿಂದ ಕಂಠೀರವಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಅಮೃತ ಭಾರತಿ– ಕರುನಾಡ ಜಾತ್ರೆ’ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಅವರು ಮಾತನಾಡಿದರು.
‘ಹಿಂದೆಂದೂ ಮಾಡದ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೋಟೊ ಹಾಕುವ ಕೆಲಸ ಮಾಡಿದೆವು. ಅದರ ಬಗ್ಗೆ ಮಾತಿಲ್ಲ. ಅವರ ನಾಯಕರ ಫೋಟೊ ಹಾಕಲಿಲ್ಲ ಎಂದು ದುಃಖಪಟ್ಟರು. ನೆಹರೂ ಅವರ ಬಗ್ಗೆ ನಮಗೆ ಅಪಾರ ಗೌರವ ಇದೆ. ನಾವು ಅವರನ್ನು, ಅವರ ಕೆಲಸವನ್ನು ಮರೆತಿಲ್ಲ’ ಎಂದು ಬೊಮ್ಮಾಯಿ ಹೇಳಿದರು.
‘ಪ್ರಧಾನಿ ನರೇಂದ್ರ ಮೋದಿ ನೆಹರೂ ಅವರಿಗೆ ಗೌರವ ಕೊಟ್ಟಿದ್ದಾರೆ. ಮೊದಲ ಪ್ರಧಾನಿ ನೆಹರೂ ಅವರಿಂದ ಹಿಡಿದು ವಾಜಪೇಯಿ ಅವರವರೆಗೂ ಏನೆಲ್ಲ ಕೊಡುಗೆ ನೀಡಿದ್ದಾರೆ ಎಂಬ ಪ್ರದರ್ಶನ ದೆಹಲಿಯಲ್ಲಿ ಮಾಡಿದ್ದಾರೆ’ ಎಂದರು.
‘ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಮೊದಲಿಗರು ರೈತರು. ಕೂಲಿ ಕಾರ್ಮಿಕರೂ ತಿರುಗಿಬಿದ್ದಿದ್ದರು. ಸಾವಿರಾರು ಅನಾಮಧೇಯರು ಪ್ರಾಣ ಕಳೆದುಕೊಂಡರು. ಅವರನ್ನೆಲ್ಲ ಸ್ಮರಿಸುವ ಕಾಲ ಬಂದಿದೆ’ ಎಂದು ಹೇಳಿದರು.
‘ಕಾಶ್ಮೀರದಲ್ಲಿ, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಅವಕಾಶ ಇರಲಿಲ್ಲ. ಪ್ರಧಾನಿ ನರೇಂದ್ರಮೋದಿ ಇದೀಗ ದೇಶದೆಲ್ಲೆಡೆ ತಿರಂಗಾ ಹಾರುವಂತೆ ಮಾಡಿದ್ದಾರೆ’ಎಂದುಬಿಜೆಪಿ ರಾಜ್ಯಘಟಕದ ಅಧ್ಯಕ್ಷನಳಿನ್ ಕುಮಾರ್ಕಟೀಲ್ ಹೇಳಿದರು.
‘ಸಿದ್ದರಾಮಯ್ಯ ಅವರು ಸ್ವಾತಂತ್ರ್ಯ ನಾವು ತಂದುಕೊಟ್ಟೆವು ಎನ್ನುತ್ತಾರೆ. ಅವರಿಗೆ ಇದು ಮೂರನೇ ಪಾರ್ಟಿ. ಅವರಂತೂ ಸ್ವಾತಂತ್ರ್ಯ ತಂದಿಲ್ಲ. ಕಾಂಗ್ರೆಸ್ನವರು ಅನೇಕ ಪ್ರಧಾನಿಗಳನ್ನು ದೇಶಕ್ಕೆ ನೀಡಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಬಿಟ್ಟರೆ ಇನ್ಯಾರೂ ಕೆಲಸ ಮಾಡಲಿಲ್ಲ’ ಎಂದು ಕಂದಾಯ ಇಲಾಖೆ ಸಚಿವ ಆರ್. ಅಶೋಕ ಹೇಳಿದರು.
ಸಂಸದ ಸದಾನಂದಗೌಡ, ರಾಜ್ಯಸಭೆ ಸದಸ್ಯ ಲಹರ್ ಸಿಂಗ್, ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಇದ್ದರು.
‘ಕಾಂಗ್ರೆಸ್ನಿಂದ ಅಂಬೇಡ್ಕರ್ಗೆ ಕಿರುಕುಳ’
ಬೆಂಗಳೂರು: ‘ಕಾಂಗ್ರೆಸ್ನವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಎಷ್ಟು ಕಿರುಕುಳ ಕೊಟ್ಟರು ಎಂಬುದನ್ನು ರಾಜ್ಯದಾದ್ಯಂತ ಪ್ರವಾಸ ಮಾಡಿ ಜನರಿಗೆ ತಿಳಿಸಿಕೊಡುತ್ತೇವೆ’ ಎಂದು ಬಿಜೆಪಿ ಶಾಸಕ ಬಿ.ಎಸ್. ಯಡಿಯೂರಪ್ಪ ಅವರು ‘ಅಮೃತ ಭಾರತಿ– ಕರುನಾಡ ಜಾತ್ರೆ’ ಕಾರ್ಯಕ್ರಮದಲ್ಲಿ ಹೇಳಿದರು.
‘ಈಗಾಗಲೇ ಅಧಿಕಾರಕ್ಕೆ ಬಂದುಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ನವರಿದ್ದಾರೆ. ನಾಡಿನಲ್ಲಿ ಮತ್ತೆ ಪ್ರವಾಸ ಮಾಡಿ, ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟರಡ ಕಾಂಗ್ರೆಸ್ಗೆ ಉಸಿರುಗಟ್ಟಲಿದೆ ಎಂದರು. ‘ಸ್ವಾತಂತ್ರ್ಯ ಬಂದು 75 ವರ್ಷ ಸಂದಿದೆ. ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ, ಹಿರಿಯರು ಅಹಿಂಸೆಯ ಆಚರಣೆ ಮಾಡಿದರು. ನಂತರ, ವಿಭಜನೆ, ಭಯೋತ್ಪಾದನೆ, ಇತರೆ ಎಲ್ಲವನ್ನೂ ದೇಶ ಎದುರಿಸಿ ನಿಂತಿದೆ. ಅವೆಲ್ಲವನ್ನೂ ಎದುರಿಸಿ ನಿಲ್ಲೋ ಧೈರ್ಯ ಪ್ರಧಾನಿ ನರೇಂದ್ರ ಮೋದಿಗಿದೆ. ಅವರಂತೆ ಹಗಲಿರುಳು ಕೆಲಸ ಮಾಡಿದರೆ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.