ಚಿಂಚೋಳಿ (ಕಲಬುರಗಿ): ಇಲ್ಲಿನ ಚಿಂಚೋಳಿ ಬಸ್ ನಿಲ್ದಾಣದಿಂದ ಮಂಗಳವಾರ ನಸುಕಿನ 3.30ಕ್ಕೆ ಕಳುವಾಗಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ (ಕೆಕೆಆರ್ಟಿಸಿ) ಬಸ್, ಮಧ್ಯಾಹ್ನ 4ರ ಸುಮಾರಿಗೆ ತೆಲಂಗಾಣದ ತಾಂಡೂರು ಸಮೀಪದ ಭೂಕೈಲಾಸದಲ್ಲಿ ಪತ್ತೆಯಾಗಿದೆ. ಬಸ್ ಕದ್ದ ಆರೋಪಿಗಳಿಗಾಗಿ ಚಿಂಚೋಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಚಿಂಚೋಳಿ–ಬೀದರ್ ಮಾರ್ಗದ ಬಸ್ ಅನ್ನು ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ, ಚಾಲಕ ಮತ್ತು ನಿರ್ವಾಹಕರು ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದರು. ಕಳ್ಳರು ಬಸ್ ಚಾಲನೆ ಮಾಡಿಕೊಂಡು ಒಯ್ಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
‘ಬಸ್ಅನ್ನು ಕಳ್ಳರು ತಾಲ್ಲೂಕಿನ ಪೋಲಕಪಳ್ಳಿ, ಮಿರಿಯಾಣ, ತೆಲಂಗಾಣದ ತಾಂಡೂರು ಮಾರ್ಗವಾಗಿ ಕೊಡಂಗಲವರೆಗೆ 55 ಕಿ.ಮೀ. ಒಯ್ದಿದ್ದಾರೆ. ನಂತರ ಕೊಡಂಗಲನಿಂದ ಹಿಂದಕ್ಕೆ ಬಂದು, ಚಿಂಚೋಳಿಯಿಂದ 30 ಕಿ.ಮೀ. ದೂರದ ಭೂಕೈಲಾಸದ ರಸ್ತೆ ಬದಿ ತಗ್ಗಿನಲ್ಲಿ ನಿಲ್ಲಿಸಿ ಪರಾರಿ ಆಗಿ ದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
‘ಬಸ್ ಪತ್ತೆಗಾಗಿ ರಚಿಸಿದ್ದ ತಂಡಗಳು ಹೈದರಾಬಾದ್ ಮತ್ತು ಮಹಿಬೂಬನಗರಕ್ಕೆ ತೆರಳಿದ್ದವು. ಕಳುವಾದ 13 ಗಂಟೆಯಲ್ಲಿ ಬಸ್ ಸಿಕ್ಕಿದೆ’ ಎಂದು ಸಿಪಿಐ ಅಮರಪ್ಪ ಶಿವಬಲ್ ತಿಳಿಸಿದರು.