ಬೆಂಗಳೂರು: ವಿದೇಶಗಳಿಂದ ಕೋವಿಡ್ ಲಸಿಕೆ ಖರೀದಿಸಲು ಈಗಾಗಲೇ ಟೆಂಡರ್ ಕರೆದಿದ್ದು, ಅದಕ್ಕೆ ಕೇಂದ್ರ ಸರ್ಕಾರದ ಅನುಮತಿ ಬೇಕಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ ಹಣದಿಂದ ಲಸಿಕೆ ತರಿಸಲು ಉದ್ದೇಶಿಸಿದ್ದೇವೆ ಎಂದರು.
ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಟೆಂಡರ್ ಕರೆದಿದ್ದೇವೆ, ಕೆಲವು ಕಂಪನಿಗಳು ಮುಂದಕ್ಕೆ ಬಂದಿವೆ. ಪ್ರಕ್ರಿಯೆ ಇನ್ನೂ ಅಂತಿಮಗೊಳಿಸಿಲ್ಲ ಎಂದು ಹೇಳಿದರು.
ಕೋವಿಡ್ ಪ್ರಕರಣಗಳು ಕಡಿಮೆ ಆಗುತ್ತಿವೆ. ಪರೀಕ್ಷೆ ಮಾಡಿದವರಲ್ಲಿ ಕೋವಿಡ್ ಲಕ್ಷಣ ಇರುವವರ ಸಂಖ್ಯೆ ಕಡಿಮೆ ಆಗುತ್ತಿರುವುದು ಇದಕ್ಕೆ ಸೂಚನೆ. ಪರೀಕ್ಷೆ ಸಂಖ್ಯೆಯನ್ನು ತಗ್ಗಿಸಿಲ್ಲ ಎಂದೂ ಹೇಳಿದರು.
ಕೋವಿಡ್ ಲಸಿಕೆಗಳನ್ನು ಇನ್ನು ಮುಂದೆ ಶಾಲೆಗಳು,ಸಮುದಾಯ ಭವನ ಮತ್ತು ಮೈದಾನಗಳು ಸೇರಿ ವಿವಿಧೆಡೆ ನೀಡಲು ವ್ಯವಸ್ಥೆ ಕಾರ್ಯಪಡೆ ಚಿಂತನೆ ನಡೆಸಿದೆ, ಕೋವಿಡ್ ಸೆಂಟರ್ಗಳನ್ನು ಹೋಬಳಿ ಮಟ್ಟದಲ್ಲೂ ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸುಧಾಕರ್ ಹೇಳಿದರು.