ಬೆಂಗಳೂರು:ರಾಜ್ಯದಲ್ಲಿ ಹೊಸದಾಗಿ 571 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 9.53 ಲಕ್ಷ ಮೀರಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,128ಕ್ಕೆ ಏರಿಕೆಯಾಗಿದೆ.
ಸೋಂಕಿತರ ಪೈಕಿಬೆಂಗಳೂರಿನಲ್ಲಿ ಇಬ್ಬರು, ಧಾರವಾಡ ಮತ್ತು ಮೈಸೂರಿನಲ್ಲಿ ತಲಾ ಒಬ್ಬರು ಸೇರಿ ಒಟ್ಟು ನಾಲ್ಕು ಮಂದಿ ಮರಣ ಹೊಂದಿದ್ದಾರೆ. ಇದರಿಂದ ಮೃತರ ಸಂಖ್ಯೆ 12,350ಕ್ಕೆ ತಲುಪಿದೆ. ಸೋಂಕಿತರಲ್ಲಿ496 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಗುರುವಾರ 385 ಮಂದಿಗೆ ಸೋಂಕು ದೃಢಪಟ್ಟಿದೆ. ಕಲಬುರ್ಗಿ 23, ಮೈಸೂರು 20, ದಕ್ಷಿಣ ಕನ್ನಡ 19, ವಿಜಯಪುರ 13, ತುಮಕೂರು 11, ಬೀದರ್ 8, ಶಿವಮೊಗ್ಗ ಹಾಗೂ ಚಿತ್ರದುರ್ಗದಲ್ಲಿ ತಲಾ 6 ಹೊಸ ಪ್ರಕರಣಗಳು ವರದಿಯಾಗಿವೆ.
30 ಸಾವಿರ ದಾಟಿದ ಲಸಿಕೆ ಗುರಿ
ರಾಜ್ಯದಲ್ಲಿ ಲಸಿಕೆ ಅಭಿಯಾನದ ನಾಲ್ಕನೇ ದಿನವಾದ ಗುರುವಾರ ರಾಜ್ಯದಾದ್ಯಂತ 10,525 ಹಿರಿಯ ನಾಗರಿಕರು ಹಾಗೂಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 59 ವರ್ಷದೊಳಗಿನ 1,561 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಒಟ್ಟಾರೆ ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ಒಟ್ಟು 38,811 ಮಂದಿ ಲಸಿಕೆ ಪಡೆದಿದ್ದಾರೆ.
‘ನಾಲ್ಕೂ ದಿನಗಳ ಪೈಕಿ ಗುರುವಾರ ಒಟ್ಟು 12,086 ಮಂದಿ ಲಸಿಕೆ ಹಾಕಿಸಿಕೊಂಡಿದ್ದು, ಲಸಿಕೆ ಪ್ರಮಾಣ ಏರುಗತಿಯಲ್ಲಿ ಸಾಗಿದೆ. ಆದರೆ, ಈವರೆಗೂ ಲಸಿಕೆ ಪಡೆದುಕೊಂಡ ಯಾರೊಬ್ಬರಿಗೂ ಆರೋಗ್ಯದಲ್ಲಿ ಸಮಸ್ಯೆ ಅಥವಾ ಅಡ್ಡಪರಿಣಾಮಗಳು ಕಂಡು ಬಂದಿಲ್ಲ’ ಎಂದು ಇಲಾಖೆ ಹೇಳಿದೆ.
ಬೆಂಗಳೂರಿನಲ್ಲಿ ಈವರೆಗೂ 14,893 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಮೈಸೂರು, ತುಮಕೂರು, ಉತ್ತರ ಕನ್ನಡ,ಬಳ್ಳಾರಿ,ಧಾರವಾಡ, ಶಿವಮೊಗ್ಗ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಮಂದಿ ಲಸಿಕೆಗೆ ಆಸಕ್ತಿ ತೋರಿದ್ದಾರೆ. ಕೊಪ್ಪಳ, ದಾವಣಗೆರೆ, ಚಾನರಾಜನಗರ, ಕೊಡಗು ಜಿಲ್ಲೆಗಳಲ್ಲಿ ಅತಿ ಕಡಿಮೆ ಜನರು ಲಸಿಕೆ ಪಡೆದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.