ಬೆಂಗಳೂರು: ಕೋವಿಡ್ನಿಂದ ಆಸ್ಪತ್ರೆಗಳಿಗೆ ದಾಖಲಾದ 72 ಗಂಟೆಗಳ ಅವಧಿಯಲ್ಲಿ ಮೃತಪಟ್ಟವರ ಮರಣಕ್ಕೆ ಕಾರಣಗಳನ್ನು ತಿಳಿದುಕೊಳ್ಳಲು ಡೆತ್ ಆಡಿಟ್ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದರು.
ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆದ 10 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಪಂಚಾಯಿತಿ ಸಿಇಒಗಳ ವಿಡಿಯೊ ಸಂವಾದದಲ್ಲಿ ಮಾತನಾಡಿದ ಅವರು, 'ರಾಜ್ಯದಲ್ಲಿ ಕೋವಿಡ್ನಿಂದಾಗಿ ಶೇ 50 ರಷ್ಟು ಸಾವು ಮೊದಲ 72 ಗಂಟೆಗಳಲ್ಲಿ ಸಂಭವಿಸಿವೆ'ಎಂದರು.
ವಿವಿಧ ಜಿಲ್ಲೆಗಳ ಡೆತ್ ಆಡಿಟ್ ಬಗ್ಗೆ ವಿವರ ಪಡೆದ ಮುಖ್ಯಮಂತ್ರಿಯವರು, ಧಾರವಾಡ ಜಿಲ್ಲೆಯಲ್ಲಿ ಮರಣ ಪ್ರಮಾಣ ಹೆಚ್ಚಾಗಿರುವ ಕಾರಣಕ್ಕೆ ಅಲ್ಲಿಗೆ ವಿಶೇಷ ತಂಡವೊಂದನ್ನು ಕಳುಹಿಸಬೇಕು ಎಂದು ಸೂಚಿಸಿದರು.
‘ಲೋಪಗಳು ಆಗಿದ್ದರೆ, ಅವುಗಳನ್ನು ತಿದ್ದಿಕೊಂಡು ಎಲ್ಲರ ಸಹಕಾರದೊಂದಿಗೆ ರೋಗ ಪ್ರಮಾಣ ಮತ್ತು ಮರಣ ಪ್ರಮಾಣಕ್ಕೆ ಕಡಿವಾಣ ಹಾಕಬೇಕು’ ಎಂದೂ ಹೇಳಿದರು.