ಬೆಂಗಳೂರು: ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಗಳಿಗೆ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್ ತಿರುಗೇಟು ನೀಡಿದ್ದಾರೆ.
'ಜವಾಬ್ದಾರಿಯುತ ಸ್ಥಾನದಲ್ಲಿರುವ ಕಾಂಗ್ರೆಸ್ ನಾಯಕರು ತಮ್ಮ ನಿರಾಧಾರ, ಸತ್ಯಕ್ಕೆ ದೂರವಾದ ಆರೋಪಗಳ ಮೂರನೇ ಅಲೆಯನ್ನು ಮುಂದುವರೆಸಿರುವುದು ವಿಷಾದಕರ. ಕರ್ನಾಟಕದಲ್ಲಿ ಕೋವಿಡ್ ಮರಣ ಪ್ರಮಾಣ ಕೇವಲ ಶೇ 1 ಇದ್ದು, ಮೂರನೇ ಅಲೆಯಲ್ಲಿ ಶೇ 1.9 ಜನ ಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.
'ಇದಕ್ಕೆ ಮುಖ್ಯ ಕಾರಣ ಲಸಿಕಾಕರಣ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಸಹಕಾರದಿಂದ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಶೇ 100ರಷ್ಟು ಮೊದಲ ಡೋಸ್ ಪೂರೈಸಿದ್ದು, ಶೇ 87.6 ಜನರಿಗೆ ಎರಡೂ ಡೋಸ್ ನೀಡಲಾಗಿದೆ. ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರು, ಹಿರಿಯ ನಾಗರಿಕರಲ್ಲಿ ಶೇ 51ರಷ್ಟು ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ನೀಡಲಾಗಿದೆ' ಎಂದು ವಿವರಿಸಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಕಾಂಗ್ರೆಸ್ ನಾಯಕರು ತಮ್ಮ ನಿರಾಧಾರ, ಸತ್ಯಕ್ಕೆ ದೂರವಾದ ಆರೋಪಗಳ ಮೂರನೇ ಅಲೆಯನ್ನು ಮುಂದುವರೆಸಿರುವುದು ವಿಷಾದಕರ.
— Dr Sudhakar K (@mla_sudhakar) January 30, 2022
ಕರ್ನಾಟಕದಲ್ಲಿ ಕೋವಿಡ್ ಮರಣ ಪ್ರಮಾಣ ಕೇವಲ 1% ಇದ್ದು, ಮೂರನೇ ಅಲೆಯಲ್ಲಿ 1.9% ಜನ ಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
1/3 https://t.co/MFIKKI4IU7
ಕೊರೊನಾ ಪರಿಸ್ಥಿತಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ಸರ್ಕಾರವು ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದೆ. ಇದಕ್ಕಿಂತ ಅಸಹ್ಯ ಬೇರೇನೂ ಇಲ್ಲ. ಸರ್ಕಾರದ ಈ ನಡೆ ಲಕ್ಷಾಂತರ ಜನರ ಸಾವನ್ನು ಸಂಭ್ರಮಿಸಿದಂತೆಯೇ ಸರಿ ಎಂದು ಸಿದ್ದರಾಮಯ್ಯ ಟೀಕಿಸಿದ್ದರು.
'ಸಾಂಕ್ರಾಮಿಕದ ಸಂದರ್ಭದಲ್ಲಿ ಸರ್ಕಾರಕ್ಕೆ ಸಹಕಾರ ನೀಡುವುದು ಬಿಟ್ಟು ರಾಜಕೀಯ ಲಾಭ ಪಡೆಯಲು ವಿನಾಕಾರಣ ಟೀಕೆ ಮಾಡುವುದು ಎಷ್ಟು ಸರಿ? ಕೊರೊನಾ ಎಂಬುದೇ ಇಲ್ಲ, ಅದು ಬಿಜೆಪಿ ಸೃಷ್ಟಿ ಎನ್ನುವ ಅಧ್ಯಕ್ಷರು ಒಂದು ಕಡೆ, ಕೊರೊನಾ ನಿಯಂತ್ರಣದ ಬಗ್ಗೆ ಮಾತನಾಡುವ ಪ್ರತಿಪಕ್ಷ ನಾಯಕರು ಇನ್ನೊಂದು ಕಡೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು?' ಎಂದು ಸುಧಾಕರ್ ಟ್ವೀಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.