ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು, 24 ಗಂಟೆಗಳ ಅವಧಿಯಲ್ಲಿ 11,265 ಮಂದಿ ಸೋಂಕಿತರಾಗಿದ್ದಾರೆ. ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 85,480ಕ್ಕೆ ಏರಿಕೆಯಾಗಿದೆ.
ಕಳೆದ ತಿಂಗಳು ಈ ವೇಳೆ ಕೇವಲ 8,364 ಸಕ್ರಿಯ ಪ್ರಕರಣಗಳಿದ್ದವು. ತಿಂಗಳಿನಿಂದ ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಇದರಿಂದಾಗಿ ಸೋಂಕು ದೃಢ ಪ್ರಮಾಣ ಶೇ 9.94ಕ್ಕೆ ತಲುಪಿದೆ.
ಈ ತಿಂಗಳು 14 ದಿನಗಳಲ್ಲಿಯೇ 97,908 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಈವರೆಗೆ ಸೋಂಕಿತರಾದವರ ಒಟ್ಟು ಸಂಖ್ಯೆ 11 ಲಕ್ಷ (10.94 ಲಕ್ಷ) ಸಮೀಪಿಸಿದೆ.
ಒಂದು ದಿನದ ಅವಧಿಯಲ್ಲಿ 1.13 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಹೊಸದಾಗಿ ವರದಿಯಾದ ಕೋವಿಡ್ ಪ್ರಕರಣಗಳಲ್ಲಿ 12 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಮೂರಂಕಿ ತಲುಪಿದೆ.
ಬೆಂಗಳೂರಿನಲ್ಲಿ 8,155 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಈವರೆಗೆ ಸೋಂಕಿತರಾದವರ
ಸಂಖ್ಯೆ 5 ಲಕ್ಷ ದಾಟಿದೆ. ಅದೇ ರೀತಿ, ಕಲಬುರ್ಗಿ (376), ಮೈಸೂರು (356), ಬೀದರ್ (290), ತುಮಕೂರು (245), ಬಳ್ಳಾರಿ (159), ದಕ್ಷಿಣ ಕನ್ನಡ (140), ಹಾಸನ (132), ಧಾರವಾಡ (127), ವಿಜಯಪುರ (122), ಕೋಲಾರ (116), ಉಡುಪಿ (110), ಬೆಳಗಾವಿ (107) ಜಿಲ್ಲೆಯಲ್ಲಿಯೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ.
ಕೋವಿಡ್ ಪೀಡಿತರಲ್ಲಿ ಬೆಂಗಳೂರಿನಲ್ಲಿ 27 ಮಂದಿ ಸೇರಿದಂತೆ ರಾಜ್ಯದಲ್ಲಿ 38 ಮಂದಿ ಸಾವಿಗೀಡಾಗಿದ್ದಾರೆ. ಮೈಸೂರಿನಲ್ಲಿ ಐವರು, ಕಲಬುರ್ಗಿ ಹಾಗೂ ಧಾರವಾಡದಲ್ಲಿ ತಲಾ ಮೂರು ಮಂದಿ, ಬೀದರ್ನಲ್ಲಿ ಇಬ್ಬರು, ಬಳ್ಳಾರಿ ಹಾಗೂ ತುಮಕೂರಿನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಕೋವಿಡ್ನಿಂದ ಮೃತಪಟ್ಟಿರುವುದು ತಡವಾಗಿ ದೃಢಪಟ್ಟಿದೆ. ಮೂವರನ್ನು ಹೊರತುಪಡಿಸಿದರೆ ಉಳಿದವರು 50 ವರ್ಷ ಮೇಲ್ಪಟ್ಟವರಾಗಿದ್ದಾರೆ. ಈವರೆಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 13,046ಕ್ಕೆ ಏರಿಕೆಯಾಗಿದೆ.
ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವವರ ಸಂಖ್ಯೆ ಕೂಡ ಏರಿಕೆ ಕಂಡಿದೆ. ಸದ್ಯ 506 ಮಂದಿ ಐಸಿಯುನಲ್ಲಿ ಇದ್ದಾರೆ.
ರಾಜ್ಯದಲ್ಲಿ ಬುಧವಾರ 2,899 ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ. ಈವರೆಗೆ 61.26 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ.
Karnataka reports 11265 new COVID19 positive cases including 8155 cases in Bengaluru Urban, 4364 discharges and 38 deaths.
— ANI (@ANI) April 14, 2021
Total positive cases: 1094912
Total discharges: 996367
Death toll: 13046
Active cases: 85480 pic.twitter.com/YgqHdyegT4
***
ಸರ್ಕಾರದ ವೈಫಲ್ಯದಿಂದಾಗಿ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿಲ್ಲ. ರಾಜ್ಯದಲ್ಲಿ ತಕ್ಷಣವೇ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಬೇಕು
-ಎಚ್.ಕೆ.ಪಾಟೀಲ, ಕಾಂಗ್ರೆಸ್ ಶಾಸಕ
***
ರಾಜ್ಯದಲ್ಲಿ ಕೋವಿಡ್ ಲಸಿಕೆಗಳ ಕೊರತೆಯೂ ಇಲ್ಲ, ಲಾಕ್ಡೌನ್ ಮಾಡುವ ಅಗತ್ಯವೂ ಇಲ್ಲ. ಆಧಾರರಹಿತ ಆರೋಪ ಸರಿಯಲ್ಲ
- ಡಾ.ಸಿ.ಎನ್.ಅಶ್ವತ್ಥನಾರಾಯಣ, ಉಪಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.