ಮಂಡ್ಯ: ಬಿಜೆಪಿ ಶಾಸಕ ಸಿ.ಟಿ ರವಿ ಅವರು ಮಾಂಸ ತಿಂದು ಭಟ್ಕಳದ ನಾಗಬನ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ಆರೋಪಕ್ಕೆ ಸಿ.ಟಿ ರವಿ ಅವರು ಮಂಡ್ಯದಲ್ಲಿ ಬುಧವಾರ ಪ್ರತಿಕ್ರಿಯೆ ನೀಡಿದರು.
‘ಮಾಂಸ ತಿಂದು ಭಟ್ಕಳದ ನಾಗಬನದೊಳಗೆ ಹೋಗಿಲ್ಲ, ದೇವಾಲಯದ ಹೊರಾವರಣದಲ್ಲಿ ನಿಂತು ದೇವರ ದರ್ಶನ ಪಡೆದಿದ್ದೇನೆ. ನಾನು ಮಾಂಸ ತಿನ್ನುವ ಜಾತಿಯಲ್ಲಿ ಹುಟ್ಟಿದ್ದೇನೆ. ಆದರೆ ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ’ ಎಂದು ಸಿ.ಟಿ.ರವಿ ಹೇಳಿದರು.
‘ಈ ಕುರಿತು ಕೆಲವರು ವಿವಾದ ಹುಟ್ಟು ಹಾಕುತ್ತಿದ್ಧಾರೆ. ನಾನು ಮಾಂಸ ತಿನ್ನುತ್ತೇನೆ, ಹಾಗಂತ ತಿಂದು ದಾರ್ಷ್ಟ್ಯ ತೋರಿಸುವುದಿಲ್ಲ. ಮಾಂಸ ತಿಂದು ದೇವಾಲಯಕ್ಕೆ ಹೋಗುತ್ತೀನಿ, ಏನಿವಾಗ ಎಂದು ಕೇಳುವುದಿಲ್ಲ. ವ್ರತ, ಪೂಜೆ ಮಾಡುವವನು ನಾನು, ದೇವರ ಬಗ್ಗೆ ಶ್ರದ್ಧೆ ಇದೆ’ ಎಂದರು.
‘ಕ್ಷೇತ್ರ ಬದಲಾವಣೆ ಸಂಬಂಧ ಹೈಕಮಾಂಡ್ ಯಾವುದೇ ಸೂಚನೆ ನೀಡಿದರೂ ಪಾಲಿಸುತ್ತೇನೆ. ಪಕ್ಷದ ಕೆಲಸಕ್ಕೆ ಸದಾ ಸಿದ್ಧನಿದ್ದೇನೆ. ಚಿಕ್ಕಮಗಳೂರು, ಮಂಡ್ಯ ಮಾತ್ರವಲ್ಲ, ಜಮ್ಮು ಕಾಶ್ಮೀರದಲ್ಲೂ ಸ್ಪರ್ಧೆಗೆ ಸಿದ್ಧ’ ಎಂದರು.