ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ ಇಳಿಕೆ ಕಂಡಿದ್ದು, ತುಸು ಸಮಾಧಾನ ತಂದಂತಾಗಿದೆ.
ಬುಧವಾರ ಒಟ್ಟು 116 ಮಂದಿ ಅಸುನೀಗಿದ್ದಾರೆ. ಮಂಗಳವಾರಕ್ಕೆ (149) ಹೋಲಿಸಿದರೆ ಇದು ಕಡಿಮೆ.
ಆದರೆ, ಕೋವಿಡ್ ಪೀಡಿತರ ಸಂಖ್ಯೆ ಮತ್ತೆ ಏರುಗತಿಯಲ್ಲಿ ಸಾಗಿದ್ದು, ಬುಧವಾರ ಒಂದೇ ದಿನ 23,558 ಮಂದಿಗೆ ಸೋಂಕು ತಗುಲಿದೆ. ಇದ
ರೊಂದಿಗೆ ಸೋಂಕು ದೃಢ ಪ್ರಮಾಣವು ಶೇ 15.47ಕ್ಕೆ ಹೆಚ್ಚಿದೆ. ಮರಣ ಪ್ರಮಾಣ ದರ ಶೇ 0.49ಕ್ಕೆ ತಗ್ಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೊಸದಾಗಿ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 26 ಜಿಲ್ಲೆಗಳಲ್ಲಿ ಮೂರಂಕಿ ಮುಟ್ಟಿದೆ. ಮಂಗಳವಾರಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ಇಳಿಕೆಯಾಗಿದೆ. ಒಟ್ಟು 13,640 ಮಂದಿಗೆ ಕೋವಿಡ್ ದೃಢಪಟ್ಟಿದೆ.
ತುಮಕೂರಿನಲ್ಲಿ ಒಟ್ಟು 1,176 ಮಂದಿ ಸೋಂಕಿತರಾಗಿರುವುದು ಖಾತರಿಯಾಗಿದೆ. ಮೈಸೂರು (975), ಬಳ್ಳಾರಿ (792), ಕಲಬುರ್ಗಿ (757), ಬೆಂಗಳೂರು ಗ್ರಾಮಾಂತರ (544), ಮಂಡ್ಯ (492), ಉಡುಪಿ (471), ಹಾಸನ (445) ಜಿಲ್ಲೆಗಳಲ್ಲಿಯೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 12 ಲಕ್ಷದ ಗಡಿ ದಾಟಿದೆ.
ಕೋವಿಡ್ ಪೀಡಿತರ ಪೈಕಿ ಬೆಂಗಳೂರಿನಲ್ಲಿ ಒಟ್ಟು 70 ಮಂದಿ ಸಾವಿಗೀಡಾಗಿದ್ದಾರೆ. ಕಲಬುರ್ಗಿ ಹಾಗೂ ಮೈಸೂರಿನಲ್ಲಿ ಕ್ರಮವಾಗಿ 8 ಮತ್ತು 7 ಮಂದಿ, ಬೀದರ್ನಲ್ಲಿ ಐದು, ಬಳ್ಳಾರಿಯಲ್ಲಿ ನಾಲ್ಕು, ಹಾಸನದಲ್ಲಿ ಮೂರು, ಮಂಡ್ಯ, ರಾಮನಗರ, ವಿಜಯಪುರ, ಬೆಂಗಳೂರು ಗ್ರಾಮಾಂತ ರದಲ್ಲಿ ತಲಾ ಇಬ್ಬರು, ಬಾಗಲಕೋಟೆ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಹಾವೇರಿ, ಕೊಡಗು, ಕೋಲಾರ, ರಾಯ
ಚೂರು, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇದುವರೆಗೆ ಸಾವಿಗೀಡಾದವರ ಸಂಖ್ಯೆ 13,762ಕ್ಕೆ ಏರಿಕೆಯಾಗಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 1.76 ಲಕ್ಷ ದಾಟಿದ್ದು, ತೀವ್ರ ನಿಗಾ ಘಟಕಕ್ಕೆ ದಾಖಲಾಗುವವರ ಸಂಖ್ಯೆ ಮತ್ತೆ ಹೆಚ್ಚಿದೆ. ಸದ್ಯ 904 ಮಂದಿ ಐಸಿಯುನಲ್ಲಿದ್ದಾರೆ.
ಕೋವಿಡ್ ಪೀಡಿತರ ಪೈಕಿ 6,412 ಜನ ಗುಣಮುಖರಾಗಿದ್ದಾರೆ. ಇದರೊಂದಿಗೆ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 10.32 ಲಕ್ಷಕ್ಕೆ ಏರಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.