ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್ ಷಾ ಅವರ ನ್ಯಾಯಪೀಠವು ರಾಜ್ಯ ಸರ್ಕಾರ ಮತ್ತು ದೂರುದಾರ ಎಂ.ಎಸ್. ಮಹಾದೇವ ಸ್ವಾಮಿ ಅವರಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಆರು ತಿಂಗಳ ಗಡುವು ನೀಡಿದೆ. 2018ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 19 (1) (ಬಿ)ನಲ್ಲಿ ಮಾಡಿದ ತಿದ್ದುಪಡಿಯನ್ನು ಗಮನದಲ್ಲಿಟ್ಟುಕೊಂಡು, ಆ ಸಮಯದಲ್ಲಿ ಅರ್ಜಿದಾರರು ಹುದ್ದೆಯಲ್ಲಿಲ್ಲದಿದ್ದರೂ ಸಹ ಅನುಮತಿ ಅಗತ್ಯ ಎಂದು ಕುಮಾರಸ್ವಾಮಿ ಅವರ ಪರ ಹಾಜರಿದ್ದ ವಕೀಲರಂಜಿತ್ ಕುಮಾರ್ ಅವರು ವಾದಿಸಿದರು.