ಕೆಆರ್ಎಸ್ ವಾಸ್ತವಿಕ ಸ್ಥಿತಿ ಕುರಿತು ಸರ್ಕಾರವೇ ಮಾಹಿತಿ ನೀಡಬೇಕು: ಡಿಕೆಶಿ

ಬೆಂಗಳೂರು: ‘ಕೆಆರ್ಎಸ್ ಅಣೆಕಟ್ಟೆ ನಿರ್ವಹಿಸಲು ರಾಜ್ಯ ಸರ್ಕಾರದಲ್ಲಿ ಸಚಿವಾಲಯ, ಅಧಿಕಾರಿಗಳು ಮತ್ತು ತಜ್ಞರ ತಂಡಗಳಿವೆ. ಅಣೆಕಟ್ಟೆಯ ಪರಿಶೀಲನೆ ನಡೆಸಿ, ಅಲ್ಲಿನ ವಾಸ್ತವಿಕ ಸ್ಥಿತಿ ಕುರಿತು ಸರ್ಕಾರವೇ ಮಾಹಿತಿ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರದ ಕುರಿತು ಸುದ್ದಿಗಾರರ ಪ್ರಶ್ನೆಗೆ ಶುಕ್ರವಾರ ಉತ್ತರಿಸಿದ ಅವರು, ‘ಅಣೆಕಟ್ಟೆಯಲ್ಲಿ ಬಿರುಕು ಉಂಟಾಗಿದೆ ಎಂದು ಹೇಳಿ ಜನರಲ್ಲಿ ಆತಂಕ ಮೂಡಿಸುವುದು ನಮ್ಮ ಕೆಲಸವಲ್ಲ. ವಿರೋಧ ಪಕ್ಷವಾಗಿ, ಸರ್ಕಾರಕ್ಕೆ ಸಲಹೆ ನೀಡುವುದು, ಕೆಲಸ ಮಾಡದಿದ್ದಾಗ ಟೀಕಿಸುವುದು ನಮ್ಮ ಕೆಲಸ. ಜನರಲ್ಲಿ ಭಯ ಹುಟ್ಟಿಸುವ ಕೆಲಸಗಳಲ್ಲಿ ಎಂದಿಗೂ ಕಾಂಗ್ರೆಸ್ ಪಕ್ಷ ಭಾಗಿಯಾಗದು’ ಎಂದರು.
‘ಮೇಕೆದಾಟು ಸಮಾನಾಂತರ ಅಣೆಕಟ್ಟೆ ನಿರ್ಮಾಣ ಆದಷ್ಟು ಬೇಗ ಆರಂಭವಾಗಬೇಕು ಎಂಬುದು ನಮ್ಮ ಬೇಡಿಕೆ. ಅದು ಸರ್ಕಾರದ ಆದ್ಯತೆಯೂ ಆಗಬೇಕು’ ಎಂದು ಆಗ್ರಹಿಸಿದರು.
ಮಧ್ಯ ಪ್ರವೇಶಿಸುವುದಿಲ್ಲ: ‘ಬೇರೆಯವರ ಜಗಳದಲ್ಲಿ ನಾನು ಮಧ್ಯಪ್ರವೇಶ ಮಾಡುವುದಿಲ್ಲ. ಆ ಕುರಿತು ಯಾವುದೇ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಬೇರೆಯವರ ಜಗಳದಲ್ಲಿ ಮಧ್ಯಪ್ರವೇಶಿಸುವ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಅವರು ಜಗಳವಾಡಿಕೊಂಡರೆ ನಾನೇಕೆ ಮಾತನಾಡಬೇಕು? ನಮ್ಮ ಆದ್ಯತೆಯಲ್ಲದ ವಿಚಾರಗಳ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಶಿವಕುಮಾರ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.