ಬೆಂಗಳೂರು: ‘ಈ ಡಿ.ಕೆ. ಶಿವಕುಮಾರ್ ಹೆದರುವ ಮಗ ಅಲ್ಲ, ಕುತಂತ್ರಕ್ಕೆ ಹೆದರುವ ಮಗ ನಾನಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುಡುಗಿದರು.
ಮನೆಯ ಮುಂದೆ ಜಮಾಯಿಸಿದ್ದ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ‘30 ವರ್ಷಗಳ ರಾಜಕಾರಣದಲ್ಲಿ ಪಕ್ಷದ ಕಾರ್ಯಕರ್ತನಾಗಿ, ಶಾಸಕನಾಗಿ, ಸಚಿವನಾಗಿ, ಸಂಸದನಾಗಿ ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದರು.
‘ದಾಳಿ ಮಾಡಿ ನನ್ನ ಬಾಯಿ ಮುಚ್ಚಿಸಲು ಯತ್ನಿಸುವವರಿಗೆ ದೇವರು ಒಳ್ಳೆಯದು ಮಾಡಲಿ. ನಾನು ಅಧಿಕಾರಕ್ಕೆ ಅಂಟಿ ಕುಳಿತುಕೊಳ್ಳುವವನಲ್ಲ. ಉಪ ಚುನಾವಣೆ ಮುಗಿಯುವರೆಗೆ ಈ ದಾಳಿ ಮುಂದುವರಿಯಲಿದೆ’ ಎಂದೂ ಹೇಳಿದರು.
‘ಸಿಬಿಐ ಅಧಿಕಾರಿಗಳು ಮನೆಯಲ್ಲಿ ಸೀರೆ, ಪ್ಯಾಂಟು ಹೀಗೆ ಎಲ್ಲ ಲೆಕ್ಕ ತೆಗೆದುಕೊಂಡಿದ್ದಾರೆ. ಸರ್ಕಾರ ಹೇಳಿದಂತೆ ಅಧಿಕಾರಿಗಳು ಕೇಳುತ್ತಾರೆ. ಸಿಬಿಐನವರಿಗೆ ವೃತ್ತಿಪರತೆ ಇದೆ. ಇ.ಡಿ ಅಧಿಕಾರಿಗಳು ಈ ರೀತಿ ಅಲ್ಲ’ ಎಂದೂ ಹೇಳಿದರು.
‘ಪಕ್ಷದ ಕಾರ್ಯಕರ್ತರು ಇಟ್ಟಿರುವ ಅಭಿಮಾನಕ್ಕೆ ಯಾವ ಬೆಲೆ ಕೊಡಲು ಸಾಧ್ಯ ಇಲ್ಲ. ಪಕ್ಷಕ್ಕೆ ಕಳಂಕ ತರುವ ಕೆಲಸವನ್ನು ಈ ಡಿ.ಕೆ. ಶಿವಕುಮಾರ್ ಕುಟುಂಬ ಮಾಡಿಲ್ಲ’ ಎಂದೂ ಹೇಳಿದರು.