ಮೈಸೂರು: ‘ಇತಿಹಾಸವನ್ನು ತಿದ್ದದೇ ಅದು ಇರುವಂತೆಯೇ ಮಕ್ಕಳಿಗೆ ಬೋಧಿಸಬೇಕು. ಅಲ್ಲಿ ಎಡ ಮತ್ತು ಬಲಪಂಥೀಯ ಸಿದ್ಧಾಂತಗಳ ಬೋಧನೆಗೆ ಅವಕಾಶ ಇರಬಾರದು’ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಪಾದಿಸಿದರು.
ಮಂಗಳವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ‘ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಪಠ್ಯವನ್ನು ಅಳವಡಿಸಬೇಕು’ ಎಂದರು.
‘ಪಾರಂಪರಿಕ ಕಟ್ಟಡಗಳ ಉಳಿವು ಎಂದರೆ ನೆಲಸಮ ಮಾಡಿ ಮರು ನಿರ್ಮಿಸುವುದಲ್ಲ. ಕಟ್ಟಡಗಳ ಪುನಶ್ಚೇತನಕ್ಕೆ ಅವಕಾಶ ಕಲ್ಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪುನಶ್ಚೇತನಕ್ಕೆ ಅವಕಾಶ ನೀಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.