ಕುಡಿದು ದ್ವಿಚಕ್ರ ವಾಹನ ಚಾಲನೆ : ದಂಡ ಪಾವತಿಸದವನಿಗೆ ಜೈಲು ಶಿಕ್ಷೆ

ಚಿತ್ರದುರ್ಗ: ಮದ್ಯ ಸೇವಿಸಿ ದ್ವಿಚಕ್ರ ವಾಹನ ಚಾಲನೆ ಮಾಡಿ ₹ 10,250 ದಂಡ ಪಾವತಿಸಲು ಸಾಧ್ಯವಾಗದ ಸವಾರನಿಗೆ ಒಂದು ವರ್ಷ ಸಾಧಾರಣ ಶಿಕ್ಷೆ ವಿಧಿಸಿ ಸಿಜೆಎಂ ನ್ಯಾಯಾಲಯ ಮಂಗಳವಾರ ಶಿಕ್ಷೆ ವಿಧಿಸಿದೆ.
ಚಿತ್ರದುರ್ಗ ನಗರದ ಸಂಪಿಗೆ ಸಿದ್ಧೇಶ್ವರ ಶಾಲೆಯ ಹಿಂಭಾಗದ ಬಡಾವಣೆಯ ನಿವಾಸಿ ಟಿ.ರವಿಕುಮಾರ್ ಜೈಲು ಸೇರಿದ ಬೈಕ್ ಸವಾರ.
ವೃತ್ತಿಯಲ್ಲಿ ಹಮಾಲಿಯಾಗಿರುವ ರವಿಕುಮಾರ್, ಸಂಚಾರ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಫೆ.2ರಂದು ಮೆದೇಹಳ್ಳಿ ರಸ್ತೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕುಡಿದು ವಾಹನ ಚಾಲನೆ ಮಾಡಿದ್ದಕ್ಕೆ ₹ 10 ಸಾವಿರ, ಅಪಾಯಕಾರಿ ಚಾಲನೆಗೆ ₹ 10 ಸಾವಿರ ಹಾಗೂ ಹೆಲ್ಮೆಟ್ ಧರಿಸದೇ ಇರುವುದಕ್ಕೆ ₹ 500 ದಂಡ ವಿಧಿಸುತ್ತಾರೆ. ನ್ಯಾಯಾಲಯಕ್ಕೆ ಹಾಜರಾಗಿ ದಂಡ ಪಾವತಿಸುವಂತೆ ಪೊಲೀಸರು ತಾಕೀತು ಮಾಡುತ್ತಾರೆ.
ಸಿಜೆಎಂ ನ್ಯಾಯಾಲಯಕ್ಕೆ ಮಂಗಳವಾರ ಹಾಜರಾದ ರವಿಕುಮಾರ್ಗೆ ದಂಡದ ಮೊತ್ತದಲ್ಲಿ ಶೇ 50ರಷ್ಟು ವಿನಾಯಿತಿ ನೀಡಿದ ನ್ಯಾಯಾಧೀಶ ಕೆಂಪರಾಜು, ₹ 10,250 ಪಾವತಿಸುವಂತೆ ಸೂಚಿಸುತ್ತಾರೆ. ತನ್ನ ಬಳಿ ₹ 2 ಸಾವಿರ ಮಾತ್ರ ಇದೆ, ಉಳಿದ ದಂಡ ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಕೋರಿಕೊಳ್ಳುತ್ತಾರೆ. ದಂಡ ಪಾವತಿಸಲು ಸಾಧ್ಯವಾಗದ ಸವಾರನಿಗೆ ಶಿಕ್ಷೆ ವಿಧಿಸಿ ನ್ಯಾಯಾಧೀಶರು ಆದೇಶಿಸುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.