ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟ್ಟು ಹೋದ 24 ತಾಸಿನಲ್ಲೇ ಟ್ರಾನ್ಸ್‌ಫಾರ್ಮರ್‌ ಬದಲು: ಫೋನಲ್ಲೇ ದೂರು ದಾಖಲಿಸಿ

ಡಿಸೆಂಬರ್‌ ಮೊದಲ ವಾರದಿಂದಲೇ ಜಾರಿ | 160 ಟ್ರಾನ್ಸ್‌ಫಾರ್ಮರ್‌ ಬ್ಯಾಂಕ್‌ಗಳ ಸ್ಥಾಪನೆ
Last Updated 11 ನವೆಂಬರ್ 2021, 19:32 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್‌ ಪರಿವರ್ತಕಗಳು (ಟ್ರಾನ್ಸ್‌ಫಾರ್ಮರ್‌) ಕೆಟ್ಟು ಹೋಗಿ ವಾರ ಅಥವಾ ತಿಂಗಳುಗಟ್ಟಲೆ ಅಂಧಕಾರದಲ್ಲಿ ಕಳೆಯುವ ಗ್ರಾಮೀಣ, ಮಲೆನಾಡು ಮತ್ತು ಗುಡ್ಡಗಾಡು ಪ್ರದೇಶಗಳ ಜನರ ಗೋಳಾಟಕ್ಕೆ ಇದೇ ಡಿಸೆಂಬರ್‌ನಿಂದ ಮುಕ್ತಿ ಸಿಗಲಿದೆ.

ಈ ಪ್ರದೇಶಗಳ ಜತೆಗೆ ನಗರ ಪ್ರದೇಶವೂ ಸೇರಿ ರಾಜ್ಯದ ಯಾವುದೇ ಪ್ರದೇಶದಲ್ಲಿಸುಟ್ಟು ಹೋದ ಅಥವಾ ಕೆಟ್ಟು ಹೋದ ವಿದ್ಯುತ್‌ ಪರಿವರ್ತಕಗಳನ್ನು ಕೇವಲ 24 ಗಂಟೆಗಳಲ್ಲೇ ಎಸ್ಕಾಂಗಳು ಬದಲಿಸಲಿವೆ.

ಇದಕ್ಕಾಗಿ ಐದು ಎಸ್ಕಾಂಗಳ ವ್ಯಾಪ್ತಿಯ 160 ಕಡೆಗಳಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಬ್ಯಾಂಕ್‌ಗಳು ಮತ್ತು 162 ಕಡೆಗಳಲ್ಲಿ ರಿಪೇರಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.ಪರಿವರ್ತಕಗಳು ಕೆಟ್ಟು ಹೋಗಿ ಕೃಷಿ ಕಾರ್ಯಕ್ಕೆ ಅಡಚಣೆಯಾಗುವ ಸಮಸ್ಯೆಗೆ ಹೊಸ ವ್ಯವಸ್ಥೆಯಿಂದ ಪರಿಹಾರ ಸಿಗಲಿದೆ. ಒಂದು ವೇಳೆ ಟ್ರಾನ್ಸ್‌ಫಾರ್ಮರ್ ಬದಲಿಸಲು ಯಾವುದೇ ಅಧಿಕಾರಿ ಹಣ ಕೇಳಿದರೆ ಅವರನ್ನು ಅಮಾನತು ಮಾಡಲಾಗುವುದು ಎಂದು ಕೆಪಿಟಿಸಿಎಲ್‌ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಟ್ರಾನ್ಸ್‌ಫಾರ್ಮರ್‌ ಹಾಳಾದರೆ ಅದನ್ನು ಬದಲಿಸಲು ಮತ್ತು ರಿಪೇರಿ ಮಾಡುವುದಕ್ಕೆ ಸಂಬಂಧಿಸಿದಂತೆ ಸೂಕ್ತ ನಿಯಮಾವಳಿ ಇರಲಿಲ್ಲ. ಹೀಗಾಗಿ ಟ್ರಾನ್ಸ್‌ಫಾರ್ಮರ್‌ ಕೆಟ್ಟು ಹೋದರೂ ತಿಂಗಳುಗಟ್ಟಲೆ ಸರಿಪಡಿಸುತ್ತಿರಲಿಲ್ಲ. ಇದರಿಂದ ಕೃಷಿ ಪಂಪ್‌ಸೆಟ್‌ಗಳೂ ಕೆಟ್ಟು ಹೋಗುತ್ತಿದ್ದವು. ಹಾಳಾದ ಟ್ರಾನ್ಸ್‌ಫಾರ್ಮರ್‌ ಅನ್ನು ರೈತರೇ ಟ್ರ್ಯಾಕ್ಟರ್‌ನಲ್ಲಿ ಹಾಕಿಕೊಂಡು ತರುವ ಪರಿಸ್ಥಿತಿ ಇತ್ತು. ಇನ್ನು ಮುಂದೆ ಇಲಾಖೆ ಸಿಬ್ಬಂದಿಯೇ ಅಲ್ಲಿಗೆ ಹೋಗಿ ಅಳವಡಿಸುತ್ತಾರೆ ಎಂದು ಹೇಳಿದರು.

ಟ್ರಾನ್ಸ್‌ಫಾರ್ಮರ್‌ ಬ್ಯಾಂಕ್: ಪ್ರತಿ ಬ್ಯಾಂಕ್‌ನಲ್ಲೂ ಸುಮಾರು 200 ರಿಂದ 300 ಟ್ರಾನ್ಸ್‌ಫಾರ್ಮರ್‌ಗಳನ್ನು ಸಂಗ್ರಹಿಸಿಡಲಾಗುತ್ತದೆ. ಒಂದು ವೇಳೆ ಒಂದೇ ಸಲಕ್ಕೆ 200 ಪರಿವರ್ತಕಗಳು ಕೆಟ್ಟು ಹೋದರೂ ತಕ್ಷಣವೇ ಬದಲಾವಣೆ ಮಾಡಬಹುದು. ರಾಜ್ಯದ ಉದ್ದಗಲಕ್ಕೂ ಇಂತಹ ಬ್ಯಾಂಕ್‌ಗಳು ಇರುವುದರಿಂದ ತ್ವರಿತಗತಿಯಲ್ಲಿ ಸಾಗಿಸಿ ಬದಲಾವಣೆ ಮಾಡಬಹುದು ಎಂದು ತಿಳಿಸಿದರು.

ರಿಪೇರಿ ಕೇಂದ್ರಗಳೂ ಕೂಡ ಸದಾ ಸನ್ನದ್ಧ ಸ್ಥಿತಿಯಲ್ಲಿ ಇರುತ್ತವೆ. ಆಯಾ ಪ್ರದೇಶಗಳಲ್ಲಿ ಇರುವ ಟ್ರಾನ್ಸ್‌ಫಾರ್ಮರ್‌ಗಳ ಸಂಖ್ಯೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ರಿಪೇರಿ ಕೇಂದ್ರಗಳನ್ನೂ ಸಿದ್ಧಪಡಿಸಲಾಗಿದೆ. ಕೆಟ್ಟು ಹೋದ ಟ್ರಾನ್ಸ್‌ಫಾರ್ಮರ್‌ಗಳನ್ನು ತಕ್ಷಣವೇ ಸರಿಪಡಿಸಿ ಮರುಬಳಕೆಗೆ ಸಜ್ಜುಗೊಳಿಸಲಾಗುವುದು ಎಂದರು.

ಟ್ರಾನ್ಸ್‌ಪಾರ್ಮರ್‌ಗಳ ಸಾಗಣೆಗೆ ಪ್ರತ್ಯೇಕ ವಾಹನಗಳನ್ನು ಖರೀದಿಸಲಾಗುವುದು. ಆಯಾ ವಿಭಾಗದ ಭೌಗೋಳಿಕ ಅಗತ್ಯಕ್ಕೆ ತಕ್ಕಂತೆ 2 ರಿಂದ 8 ವಾಹನಗಳನ್ನು ಖರೀದಿಸಬಹುದು. ರೈತರು ಟ್ರ್ಯಾಕ್ಟರ್‌ಗಳಲ್ಲಿ ಹಾಕಿಕೊಂಡು ಬರುವುದನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ ಎಂದರು.

ದೂರವಾಣಿಯಲ್ಲಿ ದೂರು ದಾಖಲಿಸಬಹುದು

l ಪರಿವರ್ತಕಗಳ ಬದಲಾವಣೆಗೆ ಇನ್ನು ಮುಂದೆ ಅರ್ಜಿ ಬರೆಯಬೇಕಾಗಿಲ್ಲ. ಬೆಸ್ಕಾಂ ಗೆ ದೂರವಾಣಿ ಮೂಲಕ ದೂರು ದಾಖಲಿಸಿದ 24 ಗಂಟೆಗಳಲ್ಲಿ ಬದಲಾವಣೆ

l ಪರಿವರ್ತಕ ಬದಲಾವಣೆಗೆ ಹಣ ಕೇಳಿದರೆ ಜೆಇ ಅಥವಾ ಇಇ ಹೊಣೆಗಾರರ
ನ್ನಾಗಿ ಮಾಡಲಾಗುತ್ತದೆ.

l ಕೃಷಿ ಭೂಮಿಯಲ್ಲಿ ಫಸಲಿನ ಮಧ್ಯೆ ಪರಿವರ್ತಕ ಇದ್ದರೆ ವಾಹನ ಒಯ್ದು ಬದಲಿಸುವುದು ಕಷ್ಟ. ಅಂತಹ ಸಂದರ್ಭದಲ್ಲಿ ಸ್ವಲ್ಪ ತಡವಾಗಿ ಬದಲಿಸಲಾಗುವುದು. ಬೆಳೆಗೆ ಹಾನಿ ಆಗಬಾರದು ಎಂಬುದೇ ಇದರ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT