ಬೆಂಗಳೂರು: ‘ಖಡಕ್ ಆಗಿದ್ದ ಕಾರಣಕ್ಕೆ ನಾನು ಹಿಂದಕ್ಕೆ (ವಿಧಾನಸಭೆಯಲ್ಲಿ ಮೊದಲ ಸಾಲಿನಿಂದ ಎರಡನೇ ಸಾಲಿಗೆ) ಬಂದಿದ್ದೇನೆ’ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೋಪದಿಂದ ಹೇಳಿದರು.
ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ನ ಶಿವಾನಂದ ಪಾಟೀಲ, ‘ಮುಳವಾಡ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆಯನ್ನು ಕಾರ್ಯನಿರ್ವಾಹಕ ಎಂಜಿನಿಯರ್ ಅಕ್ರಮವಾಗಿ ಒಡೆಸಿದ್ದಾರೆ. ಈ ಬಗ್ಗೆ ವರ್ಷದ ಹಿಂದೆಯೇ ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆದರೂ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.
ಆಗ ಎದ್ದು ನಿಂತ ಮಾಧುಸ್ವಾಮಿ, ‘ಸಭಾಧ್ಯಕ್ಷರೇ, ಇದಕ್ಕೆ ಉತ್ತರ ನೀಡುವಂತೆ ನಿಮ್ಮ ಕಚೇರಿಯ ಸಿಬ್ಬಂದಿ ನನಗೆ ಪತ್ರ ಕಳುಹಿಸಿದ್ದಾರೆ. ನಿಮ್ಮ ಕಚೇರಿಯಿಂದ ಲೋಪ ಆಗಿದೆ’ ಎಂದರು.
ಆಗ ಶಿವಾನಂದ ಪಾಟೀಲ, ‘ನೀವು ಖಡಕ್ ಇದ್ದೀರಿ. ಇದಕ್ಕೆ ನೀವೇ ಉತ್ತರ ಕೊಟ್ಟುಬಿಡಿ’ ಎಂದು ಹೇಳಿದರು.
‘ಖಡಕ್ ಇದ್ದರೆ ಏನೂ ಪ್ರಯೋಜನ ಇಲ್ಲ. ಈಗ ಇಲ್ಲಿಗೆ ಬಂದಿದ್ದೇನಲ್ಲ’ ಎಂದು ನೀರಾವರಿ ಸಚಿವ ಮಾಧುಸ್ವಾಮಿ ಹೇಳಿದರು.