ಬೆಂಗಳೂರು: ‘ನಟ ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಅವರು ಕಾಂಗ್ರೆಸ್ ಸೇರುವ ಬಗ್ಗೆ ಕಾದು ನೋಡಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಶಿವರಾಜ್ಕುಮಾರ್ ಜತೆ ಸೋಮವಾರ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಿವಕುಮಾರ್, ‘ಶಿವರಾಜ್ ಕುಮಾರ್ ನಮ್ಮ ಆತ್ಮೀಯರು. ಅವರ ಕುಟುಂಬ ಇಡೀ ದೇಶ ಹಾಗೂ ರಾಜ್ಯದ ಆಸ್ತಿ’ ಎಂದರು.
‘ಶಿವರಾಜ್ಕುಮಾರ್ ಕುಟುಂಬದ ಮೇಲೆ ನಮಗೆ ಅಪಾರ ಗೌರವವಿದೆ. ನಮಗೂ ಅವರ ಜತೆ ವೈಯಕ್ತಿಕ ಸಂಬಂಧಗಳಿವೆ. ನಾನು ಆ ಬಗ್ಗೆ ಹೆಚ್ಚು ಹೇಳುವುದಿಲ್ಲ. ಮಧು ಬಂಗಾರಪ್ಪ ಅವರಿಗೆ ಆ ಬಗ್ಗೆ ಮಾತನಾಡುವ ಹಕ್ಕಿದೆ. ಅವರು ಮಾತನಾಡಿದ್ದಾರೆ. ಸಂದರ್ಭ ಬಂದಾಗ ಗೀತಾ ಶಿವರಾಜ್ಕುಮಾರ್ ಕೂಡಾ ಮಾತನಾಡುತ್ತಾರೆ’ ಎಂದರು.
ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ಹಿರಿಯ ನಾಯಕರ ಜತೆ ಚರ್ಚಿಸಿದ ಬಳಿಕ ಈ ಬಗ್ಗೆ ಮಾತನಾಡುತ್ತೇನೆ’ ಎಂದರು.