ಬೆಂಗಳೂರು: ‘ಅತಿವೃಷ್ಟಿ, ಕೋವಿಡ್ ಸೇರಿದಂತೆ ಎಲ್ಲ ಸಂಕಷ್ಟಗಳ ನಡುವೆಯೂ ಜನಮೆಚ್ಚುವ ರೀತಿಯಲ್ಲಿ ಆಡಳಿತ ನಡೆಸಿದ್ದೇವೆ. ರಾಜ್ಯಪಾಲರ ಭಾಷಣದಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ ಸಮರ್ಥಿಸಿದರು.
ವಿಧಾನ ಪರಿಷತ್ನಲ್ಲಿ ಸಭಾಪತಿ ಪೀಠದ ಎದುರು ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗುತ್ತಿದ್ದ ನಡುವೆಯೇ, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು,‘ರಾಜ್ಯದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ’ ಎಂದರು.
‘ಜನರ ನಿರೀಕ್ಷೆಯಂತೆ ಅಡಳಿತ ನೀಡಿದ್ದೇವೆ. ನಾವು ಉತ್ತಮ ಆಡಳಿತ ನೀಡುತ್ತಿರುವುದಕ್ಕೆ ಉಪಚುನಾವಣೆ, ಲೋಕಸಭೆ ಚುನಾವಣೆ ಫಲಿತಾಂಶಗಳೇ ಸಾಕ್ಷಿ. ಆರ್ಥಿಕ ಸ್ಥಿತಿ ಸುಧಾರಣೆಯಾಗಿದ್ದು, ರಾಜಸ್ವ ಸಂಗ್ರಹವೂ ಉತ್ತಮವಾಗಿದೆ. ತೆರಿಗೆ ಸಂಗ್ರಹ ಸಮರ್ಪಕವಾಗಿ ನಡೆಯುತ್ತಿದೆ’ ಎಂದರು.
‘ಅಭಿವೃದ್ಧಿಗೆ ಯಾವುದೇ ಹಿನ್ನಡೆ ಆಗಿಲ್ಲ. ಬಜೆಟ್ನಲ್ಲಿ ನೀಡಿದ ಭರವಸೆಯಲ್ಲಿ ಶೇ 85ರಷ್ಟು ಈಡೇರಿಸಿದ್ದೇವೆ. ನಮ್ಮ ಭರವಸೆ ಈಡೇರಿಕೆಗೆ ಬದ್ಧವಾಗಿದ್ದೇವೆ. ಕೇಂದ್ರದಿಂದ ₹ 28 ಸಾವಿರ ಕೋಟಿ ಬರುವ ನಿರೀಕ್ಷೆ ಇದೆ. ₹ 48 ಸಾವಿರ ಕೋಟಿ ಸಾಲದ ನೀಡಿದೆ. ಇದನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಆಡಳಿತ ನಡೆಸಿದವರು ದೊಡ್ಡ ಮೊತ್ತದ ಸಾಲದ ಹೊರೆ ಹೊರಿಸಿದ್ದಾರೆ’ ಎಂದು ಹಿಂದಿನ ಸರ್ಕಾರಗಳ ಆಡಳಿತ ವೈಖರಿಯನ್ನು ಬೊಮ್ಮಾಯಿ ದೂರಿದರು.