ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಕಾರ್ಯವೈಖರಿ ವಿರುದ್ಧ ಹಲವು ಸದಸ್ಯರು ಅಸಮಾಧಾನಗೊಂಡಿದ್ದು, ಭಾನುವಾರ ನಡೆದ ಸಂಘದ ರಾಜ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲೇ ಭಿನ್ನಮತ ಬಹಿರಂಗವಾಗಿದೆ.
‘ಷಡಾಕ್ಷರಿ ಸಂಘವನ್ನು ವೈಯಕ್ತಿಕ ಹಿತಾಸಕ್ತಿಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕೆಲವು ಸದಸ್ಯರು ಸಭೆಯಲ್ಲಿ ಆರೋಪಿಸಿದ್ದಾರೆ. ನೌಕರರ ಪರವಾಗಿ ಹೋರಾಟ ನಡೆಸುತ್ತಿಲ್ಲ. ನೌಕರರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪವನ್ನೂ ಕೆಲವರು ಮಾಡಿದ್ದಾರೆ. ಸರ್ಕಾರದ ಹಂತದಲ್ಲಿ ನೌಕರರ ಪರವಾದ ಪ್ರಸ್ತಾವಗಳನ್ನು ಸರಿಯಾಗಿ ಮಂಡಿಸುತ್ತಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ’ ಎಂದು ನೌಕರರ ಸಂಘದ ಕೆಲವು ಪದಾಧಿಕಾರಿಗಳು ತಿಳಿಸಿದರು.
ನೂತನ ಪಿಂಚಣಿ ಯೋಜನೆಯನ್ನು ಕೈಬಿಟ್ಟು ಹಳೆಯ ಪಿಂಚಣಿ ಯೋಜನೆಯನ್ನು ಎಲ್ಲರಿಗೂ ಅನ್ವಯಿಸಬೇಕೆಂಬ ಬೇಡಿಕೆ ಈಡೇರಿಕೆ ಹಾಗೂ ಏಳನೇ ವೇತನ ಆಯೋಗ ರಚನೆಗೆ ಒತ್ತಡ ತರುವ ಕೆಲಸವನ್ನೂ ಮಾಡುತ್ತಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಈ ಎರಡೂ ವಿಷಯದಲ್ಲಿ ಹೋರಾಟ ರೂಪಿಸುವಂತೆ ಭಾನುವಾರದ ಸಭೆಯಲ್ಲಿ ಒತ್ತಾಯ ಕೇಳಿಬಂದಿದೆ ಎಂದು ಅವರು ಮಾಹಿತಿ ನೀಡಿದರು.
ಕೆಲವು ವಿಷಯಗಳು ಪ್ರಸ್ತಾಪವಾದಾಗ ಸಭೆಯಲ್ಲಿ ತೀವ್ರ ವಾಗ್ವಾದ ನಡೆದಿದ್ದು, ಗದ್ದಲದ ವಾತಾವರಣ ನಿರ್ಮಾಣವಾಗಿತ್ತು ಎಂದು ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಷಡಾಕ್ಷರಿ, ‘ಭಿನ್ನಮತದ ಯಾವುದೇ ಘಟನೆಗಳೂ ನಡೆದಿಲ್ಲ. ಸಂಘದ ಸಭೆ ಅತ್ಯಂತ ಸುಸೂತ್ರವಾಗಿ ನಡೆದಿದ್ದು, ಸರ್ವಾನುಮತದಿಂದ ಎಲ್ಲ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ’ ಎಂದರು.