ಬೆಂಗಳೂರು: ‘ಜಿ.ಎಸ್.ಶಿವರುದ್ರಪ್ಪ ಅವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದೊಡ್ಡಮಟ್ಟದಲ್ಲಿ ಸಮುದಾಯ ಪ್ರಜ್ಞೆ ಮೂಡಿಸಲು ಪ್ರಯತ್ನಿಸಿದ್ದರು’ ಎಂದು ಕವಿ ಬಂಜಗೆರೆ ಜಯಪ್ರಕಾಶ ಅಭಿಪ್ರಾಯಪಟ್ಟರು.
ನಗರದಲ್ಲಿ ಮಂಗಳವಾರಡಾ. ಜಿಎಸ್ಸೆಸ್ ವಿಶ್ವಸ್ಥ ಮಂಡಳಿ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ 2023ನೇ ಸಾಲಿನ ಡಾ. ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
‘ಜಿಎಸ್ಸೆಸ್ ಅವರು ಪ್ರಜಾತಾಂತ್ರಿಕ ಮನಸ್ಸಿನ ಬರಹಗಾರರನ್ನು ರೂಪಿಸಿ ದ್ದರು. ಕನ್ನಡ ವಿಭಾಗದಲ್ಲೂ ಎಲ್ಲ ರೀತಿಯ ಚಳವಳಿಗಳಿಗೂ ಅವಕಾಶ ಕಲ್ಪಿಸಿದ್ದರು. ಸಮಾಜದಲ್ಲಿ ಬೆಳಕಿನ ಹಾಗೂ ಅರಿವಿನ ಹಣತೆ ಹಚ್ಚಿದ್ದರು’ ಎಂದರು.
ಜಿಎಸ್ಸೆಸ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲೇಖಕ ನಟರಾಜ್ ಹುಳಿಯಾರ್, ‘ಪೂರ್ವ ಹಾಗೂ ಪಶ್ಚಿಮದ ಕವಿಗಳನ್ನು ಬೆಸೆಯುವುದು ಹೇಗೆಂದು ಜಿಎಸ್ಸೆಸ್ ಕಲಿಸಿದ್ದಾರೆ. ಅವರು ಕೃತಿ ಹಾಗೂ ಕವಿಯ ಹಿನ್ನೆಲೆಗೆ ತೆರಳದೇ ಕೃತಿಯನ್ನೇ ಕೇಂದ್ರವಾಗಿಸಿಕೊಂಡು ವಿಮರ್ಶೆ ಮಾಡುತ್ತಿದ್ದರು’ ಎಂದರು.
ಮಹಾರಾಣಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿಡಾ.ಎಂ.ಎಸ್. ಆಶಾದೇವಿ, ‘ಇಬ್ಬರು ಪ್ರಶಸ್ತಿ ಪುರಸ್ಕೃತರೂ ಕನ್ನಡ ಹಾಗೂ ನಾಡಿನ ವಿವೇಕವನ್ನು ಎಚ್ಚರಿಸುವ ಕೆಲಸದಲ್ಲಿ ತೊಡಗಿದ್ದಾರೆ. ವಿಮರ್ಶೆಗಳು ಜನಪರ, ಸಮಾಜಮುಖಿ ಆಗಿಯೇ ಇರಬೇಕು. ಬೌದ್ಧಿಕ ಅಹಂಕಾರಕ್ಕೆ ಬರೆಯದೇ ಭಾವಕೋಶದ ಒಳಗಿನಿಂದ ಸಾಹಿತ್ಯ ಹೊರಹೊಮ್ಮಿದರೆ, ಆ ಸಾಹಿತ್ಯವು ಸೂಕ್ಷ್ಮ ಸಂವೇದನೆಯನ್ನು ಒಳಗೊಂಡಿರುತ್ತದೆ’ ಎಂದರು.
ಅಧ್ಯಾಪಕ ಸಿ.ಜಿ. ಲಕ್ಷ್ಮೀಪತಿ, ‘ಪ್ರಭುತ್ವದಿಂದ ಹೊರಗುಳಿದ ಬಂಜಗೆರೆ ಜಯಪ್ರಕಾಶ್, ಹೋರಾಟದ ಒಡನಾಟದೊಂದಿಗೆ ಸಾಹಿತ್ಯ ರಚಿಸಿ ಚಳವಳಿ ರೂಪಿಸುತ್ತಾ ಬರುತ್ತಿದ್ದಾರೆ. ಕನ್ನಡದ ರಾಷ್ಟ್ರೀಯತೆ ಹಾಗೂ ಅಸ್ಮಿತೆ ಯನ್ನು ಸದಾ ಎಚ್ಚರಿಸುವ ಕೆಲಸದಲ್ಲಿ ತೊಡಗಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.