ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊಗೇನಕಲ್‌ ಯೋಜನೆ –2’ಗೆ ವಿರೋಧ

ತಮಿಳುನಾಡಿನಿಂದ ₹4,600 ಕೋಟಿ ವೆಚ್ಚದ ಸಮಗ್ರ ಯೋಜನಾ ವರದಿ l ಆಕ್ಷೇಪ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧಾರ
Last Updated 21 ಜನವರಿ 2022, 20:32 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿ ಹೊಗೇನಕಲ್‌ ಯೋಜನೆ 2ನೇ ಹಂತವನ್ನು ಕೈಗೆತ್ತಿಕೊಳ್ಳಲು ₹4,600 ಕೋಟಿ ವೆಚ್ಚದಲ್ಲಿ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿರುವುದನ್ನು ರಾಜ್ಯ ಸರ್ಕಾರ ತೀವ್ರವಾಗಿ ವಿರೋಧಿಸಿದ್ದು, ಕಾನೂನು ರೀತಿಯಲ್ಲಿ ಇದಕ್ಕೆ ಆಕ್ಷೇಪ ಸಲ್ಲಿಸಲು ತೀರ್ಮಾನಿಸಿದೆ.

ಈ ಸಂಬಂಧ ಶುಕ್ರವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, ಅಲ್ಲಿನ ತಮಿಳುನಾಡು ಸರ್ಕಾರ ಡಿಪಿಆರ್‌ ಸಿದ್ಧಪಡಿಸಿರುವ ವಿಚಾರ ಪ್ರತಿಕಾ ವರದಿಗಳ ಮೂಲಕ ಗಮನಕ್ಕೆ ಬಂದಿದೆ ಎಂದು ಹೇಳಿದರು.

‘ತಮಿಳುನಾಡು ಈ ಯೋಜನೆಯ ವಿವರಗಳನ್ನು ಕಾವೇರಿ ನೀರು ನಿರ್ವಹಣಾ ‍ಪ್ರಾಧಿಕಾರ ಅಥವಾ ಸುಪ್ರೀಂಕೋರ್ಟ್‌ ಮುಂದೆ ಮಂಡಿಸಿಲ್ಲ. ಹೀಗಾಗಿ ತಮಿಳುನಾಡಿನ ಯಾವುದೇ ಯೋಜನೆಯನ್ನು ನಾವು ವಿರೋಧಿಸುತ್ತೇವೆ’ ಎಂದು ತಿಳಿಸಿದರು.

ಕಾವೇರಿ ಕಣಿವೆಗೆ ಸಂಬಂಧಿಸಿದಂತೆ ನ್ಯಾಯಮಂಡಳಿ ಮತ್ತು ಸುಪ್ರೀಂಕೋರ್ಟ್‌ ತೀರ್ಪುಗಳಲ್ಲಿ ಉಲ್ಲೇಖಿಸಿರುವ ನೀರಿನ ಹಂಚಿಕೆಗೆ ಅನುಗುಣವಾಗಿಯೇ ತಮಿಳುನಾಡು ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

‘ಹೊಗೇನಕಲ್– 2 ಯೋಜನೆಗೆ ಕಾನೂನಾತ್ಮಕ ಕ್ರಮಗಳ ಮೂಲಕ ಆಕ್ಷೇಪ ಸಲ್ಲಿಸುತ್ತೇವೆ. ತಮಿಳುನಾಡು ಪ್ರಕಟಿಸಿರುವ ಉದ್ದೇಶಿತ ಯೋಜನೆ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ಭೌಗೋಳಿಕ ವ್ಯಾಪ್ತಿಯಲ್ಲಿದೆ. ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ವಿವಿಧ ಆಯಾಮಗಳಲ್ಲಿ ಮತ್ತು ಕಾನೂನಿನ ಅನ್ವಯ ಪರಿಶೀಲನೆಗೆ ಒಳಪಡಬೇಕಾಗುತ್ತದೆ’ ಎಂದು ಕಾರಜೋಳ ತಿಳಿಸಿದರು.

ತಮಿಳುನಾಡು ಏಕಪಕ್ಷೀಯವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಹೊಗೇನಕಲ್‌ ಪ್ರದೇಶವು ಕರ್ನಾಟಕ ಮತ್ತು ತಮಿಳುನಾಡಿನ ಜಂಟಿ ಗಡಿ ಪ್ರದೇಶದಲ್ಲಿ 64 ಕಿ.ಮೀ ಉದ್ದದ ಭೂಪ್ರದೇಶದ ವ್ಯಾಪ್ತಿಯನ್ನು ಹೊಂದಿದೆ. ಕಾವೇರಿ ನ್ಯಾಯಮಂಡಳಿ ಐತೀರ್ಪಿನ ಕಲಂ 13 ರ ಅನ್ವಯ ಈ ಯೋಜನೆಯನ್ನು ರಾಷ್ಟ್ರೀಯ ಜಲ ವಿದ್ಯುತ್‌ ಕಂಪನಿ (ಎನ್‌ಎಚ್‌ಪಿಸಿ) ಮೂಲಕ ಕೈಗೆತ್ತಿಕೊಳ್ಳಬೇಕಾಗುವುದು ಎಂದು ಹೇಳಿದರು.

ಕರ್ನಾಟಕ ಮತ್ತು ತಮಿಳುನಾಡಿನ ಹೊಗೇನಕಲ್‌ ಜಂಟಿ ಗಡಿ ರೇಖೆಯನ್ನು ಸರ್ವೇ ಆಫ್‌ ಇಂಡಿಯಾ ಮೂಲಕ ಇನ್ನೂ ಅಂತಿಮಗೊಳಿಸಿಲ್ಲ ಎಂದೂ ಕಾರಜೋಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT