ಗೋಕರ್ಣ: 'ಬ್ರಾಹ್ಮಣ ಮಹಾಸಭಾಕ್ಕೆ ಕಚೇರಿ ನಿರ್ಮಾಣಕ್ಕೆ ಜಾಗ ಒದಗಿಸಿದ್ದೆ ನಾನು. ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚಿಸಿ ₹5 ಕೋಟಿ ಅನುದಾನ ನೀಡಿದ್ದೇನೆ. ಬಿಜೆಪಿಯವರು ಎಷ್ಟು ಅನುದಾನ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸವಾಲೆಸೆದರು.
ಕುಮಟಾ ವಿಧಾನಸಭಾ ಕ್ಷೇತ್ರದ ಗೋಕರ್ಣದಲ್ಲಿ ಬುಧವಾರ ಪಂಚರತ್ನ ಯಾತ್ರೆಗೆ ಚಾಲನೆ ನೀಡುವ ಮುನ್ನ ಮಾಧ್ಯಮದವರ ಜತೆ ಅವರು ಮಾತನಾಡಿದರು.
'ಬಿಜೆಪಿ ಹಿಂದೂಗಳನ್ನು, ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಸುತ್ತಿವೆ. ಜೆಡಿಎಸ್ ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಲು ಬಯಸುತ್ತದೆ. ನಾವು ಸರ್ವೇ ಜನಾ ಸುಖಿನೋ ಭವಂತು ಘೋಷವಾಕ್ಯವನ್ನೇ ಬಳಸುತ್ತೇವೆ' ಎಂದರು.
'ನಮ್ಮದು ಸಾವರ್ಕರ್ ಡಿ.ಎನ್.ಎ. ಅಲ್ಲ. ಸಾವರ್ಕರ್, ಟಿಪ್ಪು ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಂಬಂಧಿಸಿದ ಜಗಳ. ನಮಗೂ ಅದಕ್ಕೂ ಸಂಬಂಧ ಇಲ್ಲ' ಎಂದರು.
'ರಾಮಕೃಷ್ಣ ಹೆಗಡೆ ಅವರನ್ನು ಮುಖ್ಯಮಂತ್ರಿ ಮಾಡಿದ್ದೇ ದೇವೆಗೌಡರು. ನಳೀನ್ ಕುಮಾರ್ ಕಟೀಲ್'ಗೆ ರಾಜಕೀಯ ಗೊತ್ತಿಲ್ಲ. ಅವರು ತಮ್ಮ ಹೆಸರನ್ನು ಪಿಟೀಲು ಎಂದು ಬದಲಿಸಿಕೊಳ್ಳಲಿ' ಎಂದರು.