ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯ್‌ ಡಿಸೋಜಾ ಸಾವಿನ ಪ್ರಕರಣ: ಪೊಲೀಸರ ವಿಚಾರಣೆ

ಅಮಾನುಷ ಹಲ್ಲೆಯಿಂದ ರಾಯ್ ಡಿಸೋಜಾ ಸಾವು ಪ್ರಕರಣ
Last Updated 13 ಜೂನ್ 2021, 20:18 IST
ಅಕ್ಷರ ಗಾತ್ರ

ಮಡಿಕೇರಿ/ವಿರಾಜಪೇಟೆ: ಪೊಲೀಸರ ಅಮಾನುಷ ಹಲ್ಲೆಯಿಂದ ಮೃತಪಟ್ಟ ಪಟ್ಟಣದ ರಾಯ್‌ ಡಿಸೋಜಾ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ಪೊಲೀಸ್‌ ಸಿಬ್ಬಂದಿಯ ವಿಚಾರಣೆ ಭಾನುವಾರ ನಡೆಯಿತು.

ಡಿವೈಎಸ್‌ಪಿ ದರ್ಜೆಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ನಾಲ್ವರು ಸಿಐಡಿ ಅಧಿಕಾರಿಗಳು ವಿರಾಜಪೇಟೆಗೆ ಬಂದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದರು.

ಪ್ರಕರಣದಲ್ಲಿ ಅಮಾನತುಗೊಂಡಿರುವ ಪೊಲೀಸ್ ಸಿಬ್ಬಂದಿಗಳಾದ ನೆಹರು, ಎಂ.ಯು.ಸುನೀಲ್, ರಮೇಶ್, ಪ್ರದೀಪ್, ಲೋಕೇಶ್, ತನುಕುಮಾರ್, ಎಂ.ಎಲ್.ಸುನೀಲ್ ಹಾಗೂ ಸತೀಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಘಟನೆ ನಡೆದ ಸ್ಥಳದಲ್ಲಿ ಮಹಜರು ನಡೆಸಿದರು. ಡಿವೈಎಸ್‌ಪಿ ಜಯಕುಮಾರ್ ಅವರು ಎಸ್‌ಪಿಗೆ ಸಲ್ಲಿಸಿದ್ದ ಪ್ರಾಥಮಿಕ ವರದಿಯನ್ನೂ ಸಿಐಡಿ ತಂಡವು ಪಡೆದುಕೊಂಡಿತು. ಇನ್ನೂ ಎರಡು ದಿನ ತನಿಖೆ ನಡೆಯಲಿದ್ದು, ರಾಯ್‌ ಅವರ ಕುಟುಂಬಸ್ಥರು ಹಾಗೂ ಕ್ರೈಸ್ತ ಧರ್ಮದ ಮುಖಂಡರಿಂದ ತಂಡವು ಮಾಹಿತಿ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ರಾಯ್ ಡಿಸೋಜಾ ಅವರ ಅಂತ್ಯಕ್ರಿಯೆ ಸೇಂಟ್‌ ಅನ್ನಮ್ಮ ದೇವಾಲಯಕ್ಕೆ ಸೇರಿದ ರುದ್ರಭೂಮಿಯಲ್ಲಿ ನೆರವೇರಿತು.

ಜೆಡಿಎಸ್‌ ಶಾಸಕಾಂಗ ಪಕ್ಷದನಾಯಕಎಚ್‌.ಡಿ.ಕುಮಾರಸ್ವಾಮಿ, ರಾಯ್ ಅವರ ತಾಯಿ ಮೆಟಿಲ್ಡಾ ಲೋಬೊ ಜೊತೆದೂರವಾಣಿ ಮೂಲಕ ಘಟನೆಯ ಮಾಹಿತಿ ಪಡೆದುಕೊಂಡರು.

ರಾಯ್ ಡಿಸೋಜಾ ಅವರು ಹಲ್ಲೆಗೊಳಗಾಗಿ ಮಡಿಕೇರಿಯ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಪೊಲೀಸರು ನಡೆಸಿದ ಹಲ್ಲೆಯಿಂದಲೇ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪಿಸಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಸಂಘಟನೆಗಳೂ ತನಿಖೆಗೆ ಆಗ್ರಹಿಸಿದ್ದವು. ಪ್ರಾಥಮಿಕ ವರದಿ ಆಧರಿಸಿ, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಪೊಲೀಸ್‌ ಸಿಬ್ಬಂದಿಯನ್ನುಅಮಾನತು ಮಾಡಿದ್ದಾರೆ.

’ಕುಟುಂಬಕ್ಕೆ ನ್ಯಾಯ ಕೊಡಿಸಿ’

ರಾಯ್‌ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಕೋರಿ, ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಕೆ.ಎಂ.ವಿಲಿಯಂ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.

‘ಕೆಲವು ಪೊಲೀಸರು ರಾಯ್ ಡಿಸೋಜಾ ಅವರ ತಾಯಿಯನ್ನು ಮಡಿಕೇರಿಯಲ್ಲಿ ಭೇಟಿ ಮಾಡಿ, ದೂರು ನೀಡದಂತೆ ಹಾಗೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದಂತೆ ಕೋರಿದ್ದರು. ಮಂಗಳೂರಿಗೆ ಕರೆದೊಯ್ದು, ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿ ಮನವೊಲಿಸಲು ಯತ್ನಿಸಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಸಲು ಮುಂದಾದ ಎನ್ನುವ ಕಾರಣಕ್ಕೆ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಪೊಲೀಸರೇ ಹೊಡೆದು ಕೊಂದಿರುವುದು ಸರಿಯೇ’ ಎಂದು ವಿಲಿಯಂ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT