ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ ಈ ಬಾರಿಯೂ ಸರಳ: ಸಿ.ಎಂ. ಬೊಮ್ಮಾಯಿ

Last Updated 3 ಸೆಪ್ಟೆಂಬರ್ 2021, 20:27 IST
ಅಕ್ಷರ ಗಾತ್ರ

ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಉತ್ಸವವನ್ನು ಕಳೆದ ಬಾರಿಯಂತೆ ಈ ವರ್ಷವೂ ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆಸಲು ಉನ್ನತ ಮಟ್ಟದ ಸಮಿತಿ ನಿರ್ಧರಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಈ ಸಭೆಯಲ್ಲಿ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್, ಕೋವಿಡ್‌ ಇರುವುದರಿಂದ ಕಳೆದ ವರ್ಷದಂತೆಯೇ ಕನಿಷ್ಠ ಜನರ ಭಾಗವಹಿಸುವಿಕೆಯ ಮೂಲಕ ದಸರಾ ಆಚರಿಸಲಾಗುವುದು. ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಿಂದ ಹಿಡಿದು ಒಂಬತ್ತು ದಿನಗಳೂ ಎಲ್ಲ ಕಾರ್ಯಕ್ರಮಗಳು ಸರಳವಾಗಿ ನಡೆಯಲಿವೆ ಎಂದರು.

ದಸರಾ ಮಹೋತ್ಸವದ ಉದ್ಘಾಟಕರು ಯಾರು ಎಂಬುದನ್ನು ತೀರ್ಮಾನಿಸುವ ಅಧಿಕಾರ ಮುಖ್ಯಮಂತ್ರಿಯವರಿಗೆ ನೀಡಲಾಗಿದೆ. ಕಳೆದ ವರ್ಷ ಉದ್ಘಾಟನೆ ದಿನ 150, ಒಂಬತ್ತು ದಿನಗಳ ಕಾರ್ಯಕ್ರಮಗಳಲ್ಲಿ ತಲಾ 50 ಮತ್ತು ಅರಮನೆ ಒಳಗೇ ನಡೆದ ಜಂಬೂಸವಾರಿಯಲ್ಲಿ 300 ಜನರಿಗೆ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಈ ವರ್ಷವೂ ಅಷ್ಟೇ ಜನರ ಭಾಗವಹಿಸುವಿಕೆಗೆ ಒಪ್ಪಿಗೆ ನೀಡಲಾಗಿದೆ. ಸೆಪ್ಟೆಂಬರ್‌ 15 ರ ಬಳಿಕ ಇನ್ನೊಂದು ಸಭೆ ನಡೆಸಿ, ಕೋವಿಡ್‌ ಪ್ರಮಾಣ ಕಡಿಮೆ ಇದ್ದರೆ, ಈಗ ನಿರ್ಧರಿಸಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಜನರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ದಸರಾ ಸಂದರ್ಭದಲ್ಲಿ ದೀಪಾಲಂ ಕಾರ ವ್ಯವಸ್ಥೆ ಮಾಡಲಾಗುವುದು. ಒಂಬತ್ತು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಲಿದೆ. ಕಳೆದ ದಸರಾದ ಬಾಕಿ ₹8 ಕೋಟಿಯನ್ನು ಪಾವತಿ ಮಾಡಲು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಈ ವರ್ಷಮೈಸೂರು, ಚಾಮರಾಜನಗರ ಹಾಗೂ ಶ್ರೀರಂಗ ಪಟ್ಟಣದಲ್ಲಿ ದಸರಾ ಆಚರಣೆ ನಡೆಸಲು ₹6 ಕೋಟಿ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಸೋಮಶೇಖರ್‌ ತಿಳಿಸಿದರು.

ಪ್ರವಾಸೋದ್ಯಮ ಸರ್ಕೀಟ್‌ಗೆ ಚಿಂತನೆ: ಬೊಮ್ಮಾಯಿ
ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡಂತೆ ಪ್ರವಾಸೋದ್ಯಮ ಸರ್ಕೀಟ್ ರಚಿಸಬೇಕು ಎಂದು ಮೂರು ಜಿಲ್ಲೆಗಳ ಜನಪ್ರತಿನಿಧಿಗಳು ಮನವಿ ಮಾಡಿದ್ದು, ಆ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಮೈಸೂರಿನಲ್ಲಿ ಆರ್ಥಿಕ ಚಟುವಟಿಕೆಗಳು ನಿಂತು ಹೋಗಿದೆ. ಅದನ್ನೇ ಅವಲಂಬಿಸಿಕೊಂಡು ಬದುಕು ಸಾಗಿಸುತ್ತಿರುವವರಿಗೆ ತೊಂದರೆ ಆಗಿದೆ. ಇದನ್ನು ಸರಿಪಡಿಸಲು ಮುಂಬರುವ ದಿನಗಳಲ್ಲಿ ಸಂಬಂಧಪಟ್ಟವರ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ಕಳೆದ ವರ್ಷ ದಸರಾ ಮುಗಿದ ಮಾರನೇ ದಿನವೇ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಅವರು ಆಗಿನ ಖರ್ಚು–ವೆಚ್ಚಗಳ ಲೆಕ್ಕವನ್ನು ಒಪ್ಪಿಸಿದ್ದರು. ಇನ್ನು ಮುಂದೆ ಇದೇ ಪರಂಪರೆ ಮುಂದುವರಿಯಲಿದೆ ಎಂದು ಬೊಮ್ಮಾಯಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT