ಮೈಸೂರು: ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡ ವಿಧಾನಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರವೂ ಮುಂದುವರಿದಿದ್ದು, ಕಾಂಗ್ರೆಸ್ ಪಕ್ಷವು ಇದೇ ಮೊದಲಿಗೆ ಗೆಲುವಿನತ್ತ ಮುಂದಡಿ ಇಟ್ಟಿದೆ.
ಕಡಿಮೆ ಮತ ಪಡೆದ ಅಭ್ಯರ್ಥಿಗಳ ಎಲಿಮಿನೇಷನ್ ಪ್ರಕ್ರಿಯೆ ಮುಂದುವರಿದಿದ್ದು, ಈ ಹಂತದಲ್ಲೂ ಕಾಂಗ್ರೆಸ್ನ ಮಧು ಜಿ. ಮಾದೇಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿಯು 2ನೇ ಸ್ಥಾನದಲ್ಲಿದೆ. ಜೆಡಿಎಸ್ ನಂತರದ ಸ್ಥಾನದಲ್ಲಿದೆ.
ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಗೆಲುವಿಗೆ ನಿಗದಿಪಡಿದ್ದ ಕೋಟಾವನ್ನು ಯಾವೊಬ್ಬ ಅಭ್ಯರ್ಥಿಯೂ ತಲುಪಲಿಲ್ಲ. ಹೀಗಾಗಿ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತಿದೆ. ಕ್ರಮವಾಗಿ ಕಡಿಮೆ ಮತಗಳನ್ನು ಪಡೆದಿರುವವರನ್ನು ಎಲಿಮಿನೇಟ್ ಮಾಡಿ, ಅವರಿಗೆ ದೊರೆತ2ನೇ ಪ್ರಾಶಸ್ತ್ಯದ ಮತಗಳನ್ನು ಆಯಾ ಅಭ್ಯರ್ಥಿಗಳಿಗೆ ವರ್ಗಾಯಿಸಲಾಯಿತು.
ಚುನಾವಣಾಧಿಕಾರಿ ಡಾ.ಜಿ.ಸಿ. ಪ್ರಕಾಶ್, ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್, ಅಶ್ವಥಿ ಗೌತಮ್, ಚಾರುಲತಾ ಸೋಮಲ್, ಗಿರೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಪ್ರಕ್ರಿಯೆ ನಡೆಸಿದರು.
ಅಭ್ಯರ್ಥಿಗಳಾದ ಮೈ.ವಿ. ರವಿಶಂಕರ್, ಎನ್.ಎಸ್. ವಿನಯ್, ಡಾ.ಬಿ.ಎಚ್. ಚನ್ನಕೇಶವಮೂರ್ತಿ ಇದ್ದರು.