ಮಂಗಳೂರು: ಕಾಸರಗೋಡು ಜಿಲ್ಲೆಯ ಸರೋವರ ಕ್ಷೇತ್ರ ಅನಂತಪುರದ ದೇವರ ಮೊಸಳೆ 'ಬಬಿಯಾ' ಭಾನುವಾರ ರಾತ್ರಿ ಮೃತಪಟ್ಟಿದೆ.
ಈ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಈ ಮೊಸಳೆ ಪ್ರಮುಖ ಆಕರ್ಷಣೆಯಾಗಿತ್ತು.
ಸರೋವರದ ಮಧ್ಯಭಾಗದಲ್ಲಿ ಈ ದೇವಸ್ಥಾನ ಇದೆ. ಅರ್ಚಕರು ಪೂಜೆಯ ನಂತರ ಈ ಸರೋವರಕ್ಕೆ ಬಂದು 'ಬಬಿಯಾ' ಎಂದು ಕರೆಯುತ್ತಿದ್ದರು. ಆಗ ಅಲ್ಲಿಗೆ ಬರುತ್ತಿದ್ದ ಈ ಮೊಸಳೆ, ಅವರು ಕೊಡುವ ಪ್ರಸಾದ ಸೇವಿಸುತ್ತಿತ್ತು. ಇದು ಭಕ್ತರಿಗೆ ಅಚ್ಚರಿಯನ್ನುಂಟು ಮಾಡುತ್ತಿತ್ತು.
'ಈ ಮೊಸಳೆ ಇಲ್ಲಿಗೆ ಹೇಗೆ ಬಂತು ಎಂಬುದು ಯಾರಿಗೂ ಗೊತ್ತಿಲ್ಲ. ಈ ಮೊದಲು ಇದ್ದ 'ಬಬಿಯಾ' ಎಂಬ ಮೊಸಳೆಯನ್ನು ಬ್ರಿಟಿಷ್ ಅಧಿಕಾರಿಗಳು ಹೊಡೆದು ಕೊಂಡಿದ್ದರು. ಇದಾದ ಕೆಲ ದಿನಗಳ ನಂತರ ಮತ್ತೊಂದು ಮೊಸಳೆ ಈ ಸರೋವರದಲ್ಲಿ ಕಾಣಿಸಿಕೊಂಡಿತ್ತು’ ಎಂದು ಈ ದೇವಸ್ಥಾನಕ್ಕೆ ಬರುವ ಹಿರಿಯರು ಹೇಳುವ ಮಾತು.