ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಫುಟ್‌ಬಾಲ್‌ ಚಿಹ್ನೆ

Last Updated 27 ಮಾರ್ಚ್ 2023, 16:20 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ನೇತೃತ್ವದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ಕ್ಕೆ (ಕೆಆರ್‌ಪಿಪಿ) ಕೇಂದ್ರ ಚುನಾವಣಾ ಆಯೋಗವು ಫುಟ್‌ಬಾಲ್‌ ಚಿಹ್ನೆ ನೀಡಿದೆ ಎಂದು ಪಕ್ಷದ ಅಧ್ಯಕ್ಷ ಜಿ. ಜನಾರ್ದನ ರೆಡ್ಡಿ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುವುದರ ಜತೆಯಲ್ಲೇ ಫುಟ್‌ಬಾಲ್‌ ಪ್ರತಿಕೃತಿಯನ್ನು ಅನಾವರಣಗೊಳಿಸಿದ ಬಳಿಕ ಮಾತನಾಡಿದ ಅವರು, ‘ಎಲ್ಲರೂ ನನ್ನನ್ನು ಫುಟ್‌ಬಾಲ್‌ ಮಾಡಿಕೊಂಡಿದ್ದರು. ಶತ್ರುಗಳು, ಸ್ನೇಹಿತರು ಮತ್ತು ಎಲ್ಲ ರಾಜಕೀಯ ಪಕ್ಷದವರು ಫುಟ್‌ಬಾಲ್‌ನಂತೆ ಆಡಿಸಿದ್ದರು. ಅದಕ್ಕಾಗಿಯೇ ಫುಟ್‌ಬಾಲ್‌ ಚಿಹ್ನೆಯನ್ನೇ ಪಡೆದುಕೊಂಡಿದ್ದೇನೆ’ ಎಂದರು.

‘ಎಲ್ಲರೊಂದಿಗೆ ನಾನೂ ಫುಟ್‌ಬಾಲ್‌ ಆಡಿದೆ. ಯಾರಿಗೆ ಎಷ್ಟು ಗೋಲು ಸಿಕ್ಕಿತು? ಯಾರು ಎಷ್ಟು ಗೋಲು ಹೊಡೆದರು? ಎಂಬುದು ನಿಮಗೇ ಗೊತ್ತಿದೆ. ಯಾವುದೇ ಪಕ್ಷದ ಜತೆಗೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ’ ಎಂದು ಹೇಳಿದರು.

ಜನವರಿ 25ರಂದು ನೂತನ ಪಕ್ಷ ಘೋಷಿಸಲಾಗಿತ್ತು. ಈವರೆಗೆ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ. 50 ಕ್ಷೇತ್ರಗಳಲ್ಲಿ ಪಕ್ಷದ ಚಟುವಟಿಕೆಗಳು ನಡೆಯುತ್ತಿವೆ. ಶೀಘ್ರದಲ್ಲಿ 19 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. 30 ಕ್ಷೇತ್ರಗಳಲ್ಲಿ ಕೆಆರ್‌ಪಿಪಿ ಗೆಲುವು ಸಾಧಿಸುವುದು ನಿಶ್ಚಿತ ಎಂದರು.

ಪ್ರಣಾಳಿಕೆಯಲ್ಲಿ ಏನಿದೆ?: ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವಾರ್ಷಿಕ ₹15,000 ನೆರವು, ಐದು ಎಕರೆವರೆಗೆ ಜಮೀನು ಹೊಂದಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಕೊಳವೆ ಬಾವಿ ಒದಗಿಸುವುದು, ವಸತಿ ರಹಿತ ಕುಟುಂಬಗಳಿಗೆ ಹೆಣ್ಣುಮಕ್ಕಳ ಹೆಸರಿನಲ್ಲಿ 2ಬಿಎಚ್‌ಕೆ ಮನೆ, ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗೆ ಸ್ನಾತಕೋತ್ತರ ಪದವಿವರೆಗೂ ಉಚಿತ ಶಿಕ್ಷಣ ಸೇರಿದಂತೆ ಹಲವು ಭರವಸೆಗಳನ್ನು ಕೆಆರ್‌ಪಿಪಿ ಪ್ರಣಾಳಿಕೆಯಲ್ಲಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT