ಬೆಳ್ತಂಗಡಿ (ದಕ್ಷಿಣ ಕನ್ನಡ): 'ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮುಳುಗುತ್ತಿರುವ ಹಡಗುಗಳಾಗಿದ್ದು, ಅವುಗಳಿಗೆ ಇನ್ನಷ್ಟು ರಂಧ್ರ ತೋಡಿ ಮುಳುಗಿಸುತ್ತಿರುವ ಪ್ರಯತ್ನ ಸರಿಯಲ್ಲ’ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.
ಶುಕ್ರವಾರ ಬೆಳ್ತಂಗಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾನೂ ಸಾರಿಗೆ ಸಚಿವನಾಗಿದ್ದವ. ಅದರ ಕಷ್ಟ ನನಗೆ ಗೊತ್ತಿದೆ. ಕಷ್ಟದಲ್ಲಿರುವ ಸಂಸ್ಥೆ ಮುಳುಗಿಸಬೇಡಿ. ಮುಳುಗಿದರೆ ಯಾರು ಮುಷ್ಕರ ಮಾಡುತ್ತಾರೋ ಅವರೇ ಕಾರಣ ಆಗುತ್ತಾರೆ ಹೊರತು ಸರ್ಕಾರವಲ್ಲ’ ಎಂದರು.
‘ಕಷ್ಟದ ಸಂದರ್ಭದಲ್ಲಿ ಸರ್ಕಾರ ಸಾಲ ಮಾಡಿ ಸಂಬಳ ಕೊಡುತ್ತಿದ್ದರೂ ಯಾರದ್ದೋ ಮಾತು ಕೇಳಿ ನೌಕರರು ಮುಷ್ಕರ ನಡೆಸುತ್ತಿರುವುದು ಸರಿಯಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಅವರು ಇಡೀ ಕರ್ನಾಟಕದ ರೈತರು ಬೆಳೆದ ಕೃಷಿ ಉತ್ಪನ್ನ, ತರಕಾರಿಯನ್ನು ಮಾರುಕಟ್ಟೆಗೆ ತಂದು ಹಾಕಲಾಗದ ಸ್ಥಿತಿಗೆ ತಂದಿಟ್ಟಿದ್ದಾರೆ’ ಎಂದರು.
‘ಸರ್ಕಾರ ಜನರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿದೆ. ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆಯೂ ಮುಖ್ಯಮಂತ್ರಿ ಚಿಂತನೆ ನಡೆಸಿದ್ದಾರೆ. ನೌಕರರು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ವಿನಂತಿಸಿದರು.