ಬೆಂಗಳೂರು: ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ ಅಂತರ ಕಾಯ್ದುಕೊಂಡು ಪ್ರಯಾಣ ಮಾಡಬೇಕು ಎಂಬ ನಿರ್ಬಂಧವನ್ನು ಸರ್ಕಾರ ತೆಗೆದು ಹಾಕಿದ್ದು, ಇರುವ ಎಲ್ಲಾ ಸೀಟುಗಳಲ್ಲೂ ಕುಳಿತು ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.
ಈ ಹಿಂದೆ ಸಾಮಾನ್ಯ ಬಸ್ಗಳಲ್ಲಿ (ಕೆಂಪು ಬಸ್) 30 ಜನರ ಪ್ರಯಾಣಕ್ಕೆ ಮಾತ್ರ ಅವಕಾಶ ಇತ್ತು.ಈಗಎಲ್ಲಾ ಸೀಟುಗಳಲ್ಲಿ ಕುಳಿತು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
‘ಬಸ್ನಲ್ಲಿ ನಿಂತು ಪ್ರಯಾಣಿಸುವಂತಿಲ್ಲ. ಮುಖಗವಸು ಕಡ್ಡಾಯವಾಗಿ ಧರಿಸಬೇಕು, ಪ್ರತಿ ಪ್ರಯಾಣದ ನಂತರ ಬಸ್ ಸ್ಯಾನಿಟೈಸ್ ಮಾಡಬೇಕು’ ಎಂದು ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿದೆ.
ಎಲ್ಲಾ ಪ್ರಯಾಣಿಕರ ಹೆಸರು, ದೂರವಾಣಿ ಸಂಖ್ಯೆ ಪಡೆಯಲಾಗುತ್ತಿತ್ತು. ಕೆಲ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ಉಷ್ಣಾಂಶ ಪರಿಶೀಲನೆ ನಡೆಸಲಾಗುತ್ತಿತ್ತು. ಈ ಪ್ರಕ್ರಿಯೆ ಇನ್ನು ಮುಂದುವರಿಯುವುದಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೆಎಸ್ಆರ್ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಎಲ್ಲಾ ಬಸ್ಗಳ ಕಾರ್ಯಾಚರಣೆ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ.ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿಬಸ್ ಕಾರ್ಯಾಚರಣೆ ಸಂಖ್ಯೆ ಹೆಚ್ಚಳ ಮಾಡಲಾಗುವುದು ಎಂದು ಅವರು ಹೇಳಿದರು.
ವೇತನಕ್ಕೆ ₹423 ಕೋಟಿ
ನಾಲ್ಕೂ ಸಾರಿಗೆ ಸಂಸ್ಥೆಗಳ ನೌಕರರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ವೇತನಕ್ಕಾಗಿ ರಾಜ್ಯ ಸರ್ಕಾರ ₹423 ಕೋಟಿ ಬಿಡುಗಡೆ ಮಾಡಿದೆ.
ಕೆಎಸ್ಆರ್ಟಿಸಿಗೆ ₹135 ಕೋಟಿ, ಬಿಎಂಟಿಸಿಗೆ ₹121 ಕೋಟಿ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ₹87 ಕೋಟಿ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ₹80 ಕೋಟಿ ಅನುದಾನ ಹಂಚಿಕೆ ಮಾಡಿಆದೇಶ ಹೊರಡಿಸಿದೆ.
‘ಈ ಅನುದಾನವನ್ನು ಮೂಲ ವೇತನ, ತುಟ್ಟಿಭತ್ಯೆ ಸೇರಿ ಶೇ 75ರಷ್ಟು ವೇತನ ವೆಚ್ಚ ಭರಿಸಿಕೊಳ್ಳಬೇಕು. ಉಳಿದ ಶೇ 25ರಷ್ಟನ್ನು ಸಂಸ್ಥೆಗಳ ಸಂಪನ್ಮೂಲದಿಂದ ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದೆ.