ಶಿವಮೊಗ್ಗ: ಪರೀಕ್ಷೆ ಇಲ್ಲದೇ ದೂರ ಶಿಕ್ಷಣ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿದ ಕುವೆಂಪು ವಿಶ್ವವಿದ್ಯಾಲಯದ ನಿರ್ಧಾರಗಳನ್ನು ಪರಿಶೀಲಿಸಿ, ವರದಿ ನೀಡಲು ರಾಜ್ಯ ಸರ್ಕಾರ ದ್ವಿಸದಸ್ಯ ಸಮಿತಿ ರಚಿಸಿದೆ. ಸಮಿತಿಯು ಮಾರ್ಚ್ 26ರಿಂದ ಕಾರ್ಯ ಆರಂಭಿಸಲಿದೆ.
ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಷಿ, ಬೆಂಗಳೂರು ನಗರ ವಿ.ವಿ ಕುಲಸಚಿವ ಶ್ರೀಧರ್ ಅವರ ನೇತೃತ್ವದ ತಂಡ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದೆ.
2019–20ನೇ ಸಾಲಿನ ದೂರ ಶಿಕ್ಷಣ ಫಲಿತಾಂಶ, ಸಿಂಡಿಕೇಟ್, ವಿದ್ಯಾವಿಷಯಕ ಪರಿಷತ್ ನಿರ್ಣಯಗಳು, ಕೆಲವು ಕೇಂದ್ರಗಳ ಫಲಿತಾಂಶ ಪ್ರಕಟಿಸಿ, ಕೆಲವು ಕೇಂದ್ರಗಳ ಫಲಿತಾಂಶ ತಡೆಹಿಡಿದಿರುವುದರ ಹಿಂದೆ ಅಕ್ರಮ ಸಾಧ್ಯತೆಗಳ ಬಗ್ಗೆ ಈ ತಂಡ ಪರಿಶೀಲಿಸಲಿದೆ.
ಕೋವಿಡ್ ಸಮಯದ ನಿಯಮಗಳ ಸಡಿಲಿಕೆ ಬಳಸಿಕೊಂಡ ವಿಶ್ವವಿದ್ಯಾಲಯ ಮೂರು ವರ್ಷಗಳ ನಂತರ ಪರೀಕ್ಷೆ ನಡೆಸದೇ ಫಲಿತಾಂಶ ಪ್ರಕಟಿಸಿತ್ತು.