ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಹೋಬಳಿಯ ಶಾಂತನಪುರ ಗ್ರಾಮದ ಸರ್ವೆ ನಂಬರ್ 9ರಲ್ಲಿನ 261 ಎಕರೆ 13 ಗುಂಟೆ ಜಮೀನು ಕಬಳಿಕೆಯಾಗಿರುವ ಆರೋಪದ ಕುರಿತು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತನಿಖೆಗೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಈ ಪ್ರಕರಣದ ಕುರಿತು ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯ ರಘುನಾಥ ರಾವ್ ಮಲ್ಕಾಪೂರೆ ಅವರ ಪ್ರಶ್ನೆಗೆ ಫೆಬ್ರುವರಿ 16ರಂದು ಉತ್ತರ ನೀಡಿದ್ದ ಕಂದಾಯ ಸಚಿವ ಆರ್. ಅಶೋಕ, ಎಸಿಬಿ ತನಿಖೆಗೆ ಆದೇಶಿಸುವ ಭರವಸೆ ನೀಡಿದ್ದರು. ಮಾರ್ಚ್ 21ರಂದು ಆದೇಶ ಹೊರಡಿಸಲಾಗಿದೆ.
ಶಾಂತನಪುರ ಗ್ರಾಮದ ಸರ್ವೆ ನಂಬರ್ 9ರಲ್ಲಿ ಸರ್ಕಾರಿ ಖರಾಬು ಜಮೀನಿತ್ತು. ಅಲ್ಲಿ ಪರಿಶಿಷ್ಟ ಜಾತಿಯ ಹಲವರಿಗೆ ಸರ್ಕಾರದಿಂದ ಜಮೀನು ಮಂಜೂರಾಗಿತ್ತು. ನೈಜ ಫಲಾನುಭವಿಗಳನ್ನು ಬಲವಂತದಿಂದ ಹೊರಹಾಕಿ ಬೇರೆಯವರು ತಮ್ಮ ಹೆಸರಿಗೆ ಈ ಜಮೀನುಗಳ ಖಾತೆ ವರ್ಗಾಯಿಸಿಕೊಂಡಿರುವುದು ಮತ್ತು ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿಸಿಕೊಂಡಿರುವುದು ಕಂಡುಬಂದಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ಪರಭಾರೆ ನಿಷೇಧ) ಕಾಯ್ದೆಯ ಉಲ್ಲಂಘನೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಕಬಳಿಕೆ ನಡೆಸಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ಎಸಿಬಿಗೆ ಆದೇಶಿಸಲಾಗಿದೆ.