ಶಿವಮೊಗ್ಗ: ‘ಸಿದ್ದರಾಮಯ್ಯ ಅವರಿಗೆ ಆರ್ಎಸ್ಎಸ್ ಏನೆಂದು ಅರ್ಥ ಆಗಬೇಕಾದರೆ ಅವರು ಒಮ್ಮೆ ಆರ್ಎಸ್ಎಸ್ ಶಾಖೆಗೆ ಬರಲಿ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆಹ್ವಾನ ನೀಡಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೆಡಗೇವಾರ್ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿರುವುದು ಇತಿಹಾಸದ ಪುಸ್ತಕಗಳಲ್ಲಿ ಉಲ್ಲೇಖವಾಗಿದೆ. ಇದನ್ನು ತೆಗೆದುಕೊಡುತ್ತೇನೆ. ಅವರು ಒಮ್ಮೆ ನೋಡಲಿ’ ಎಂದು ಹೇಳಿದರು.
‘ಯಾರೋ ಕುಡುಕರು ಹೇಳಿದ್ದಕ್ಕೆಲ್ಲ ಉತ್ತರ ಕೊಡಲು ಆಗಲ್ಲ. ಹೆಡಗೇವಾರ್ ಕೂಡ ಕಾಂಗ್ರೆಸ್ನಲ್ಲಿದ್ದರು. ಇದು ಸಿದ್ದರಾಮಯ್ಯಗೆ ಗೊತ್ತಾ? ಆರ್ಎಸ್ಎಸ್ ಪದಾಧಿಕಾರಿಗಳಲ್ಲಿ ಹಿಂದುಳಿದವರು, ದಲಿತರು ಇಲ್ಲ. ಇಲ್ಲಿರುವವರೆಲ್ಲರೂ ಹಿಂದೂಗಳೇ’ ಎಂದು ತಿರುಗೇಟು ನೀಡಿದರು.
‘ಕಾಂಗ್ರೆಸ್ಗೆ ಸಮಾಜದಲ್ಲಿ ಬೆಂಬಲ ಸಿಗದ ಕಾರಣ ಆರ್ಯ, ದ್ರಾವಿಡ, ಆರ್ಎಸ್ಎಸ್, ನಪುಂಸಕ ಎಂಬ ಪದವನ್ನು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಬಳಕೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
‘ಕುವೆಂಪು ಅವರ ನಾಡಗೀತೆಗೆ ಯಾರೂ ಅಪಮಾನ ಮಾಡಬಾರದು. ಅಪಮಾನವಾಗಿದೆ ಎಂಬ ಭಾವನೆಯನ್ನು ಕಾಂಗ್ರೆಸ್ಸಿಗರು ಸೃಷ್ಟಿಸಿದ್ದಾರೆ. ಒಂದು ವೇಳೆ ಅಪಮಾನ ಮಾಡಿದ್ದು ನಿಜವಾದರೆ ಸಂಬಂಧಪಟ್ಟವರ ಬಗ್ಗೆ ಮುಖ್ಯಮಂತ್ರಿ ಗಮನ ಹರಿಸುತ್ತಾರೆ’ ಎಂದು ತಿಳಿಸಿದರು.